ದಾವಣಗೆರೆ: ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತು ಮಾಡಿಕೊಡಲು ₹ 15,000 ಲಂಚದ ಸ್ವೀಕರಿಸುತ್ತಿದ್ದಾಗ ಇಲ್ಲಿನ ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಹಾಗೂ ಎಸ್ಡಿಎ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ (ಪ್ರಭಾರ) ಬಿ. ಅನ್ನಪೂರ್ಣಾ ಹಾಗೂ ಮಹಾನಗರ ಪಾಲಿಕೆ ವಲಯ–1ರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಲಕ್ಕಪ್ಪ ವೈ. ಲೋಕಾಯುಕ್ತ ಬಲೆಗೆ ಬಿದ್ದವರು.
ನಗರದ ಬೇತೂರು ರಸ್ತೆಯ ಇಮಾಂ ನಗರದ 4ನೇ ಕ್ರಾಸ್ ನಿವಾಸಿ ಚಂದ್ರಶೇಖರ ಬಿ. ಅವರು ಹಿಟ್ಟಿನ ಗಿರಣಿ ಮನೆಯ ಇ–ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದರು. ಇ–ಸ್ವತ್ತು ನೀಡಲು ₹ 15,000 ಲಂಚ ನೀಡುವಂತೆ ಲಕ್ಕಪ್ಪ ವೈ. ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚಂದ್ರಶೇಖರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಗುರುವಾರ ₹ 15,000 ಲಂಚ ಕೊಡಲು ಬಂದಾಗ ಕಂದಾಯ ಅಧಿಕಾರಿ ಬಿ. ಅನ್ನಪೂರ್ಣಾ ₹ 25,000ಕ್ಕೆ ಬೇಡಿಕೆ ಇಟ್ಟಿದ್ದರು. ಆಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪೂರೆ, ಲೋಕಾಯುಕ್ತ ಡಿವೈಎಸ್ಪಿ ಕಲಾವತಿ, ಪೊಲೀಸ್ ಇನ್ಸ್ಪೆಕ್ಟರ್ಗಳಾದ ಎಚ್.ಎಸ್. ರಾಷ್ಟ್ರಪತಿ, ಪ್ರಭು ಬಿ. ಸೂರಿನ, ಸಿಬ್ಬಂದಿ ಆಂಜನೇಯ, ಸುಂದರೇಶ್, ಆಶಾ, ಮಲ್ಲಿಕಾರ್ಜುನ, ಲಿಂಗೇಶ್, ಧನರಾಜ್, ಮಂಜುನಾಥ್, ಗಿರೀಶ್, ಬಸವರಾಜ, ಜಂಷಿದ್ ಖಾನಂ ಅವರ ತಂಡ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.