ಸಂತೇಬೆನ್ನೂರು: ಸಮೀಪದ ಹೊಸೂರಿನ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮುಸಿಯಾವೊಂದು ಮೂರು ತಿಂಗಳಿನಿಂದ ಕಾಟ ಕೊಡುತ್ತಿದ್ದು, ಶಿಕ್ಷಕರು, ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.
ನಾಲ್ಕು ವಿದ್ಯಾರ್ಥಿಗಳನ್ನು ಮುಸಿಯಾ ಕಚ್ಚಿ ಗಾಯಗೊಳಿಸಿದೆ.
ಗ್ರಾಮದ ಎಲ್ಲೆಡೆ ಸಂಚರಿಸುವ ಮುಸಿಯಾ ಕೆಲವೊಮ್ಮೆ ಗ್ರಾಮಸ್ಥರ ಬೈಕ್ನಲ್ಲಿ ಸವಾರಿ ಮಾಡುತ್ತದೆ. ಹಣ್ಣು, ತರಕಾರಿ ಅಂಗಡಿಗಳ ಮುಂದೆ ಆಟವಾಡುವ ಅದು ಮಧ್ಯಾಹ್ನ ಬಿಸಿಯೂಟದ ಸಮಯಕ್ಕೆ ಶಾಲೆಯ ಆವರಣ ಪ್ರವೇಶಿಸುತ್ತದೆ. ತರಗತಿ ಕೊಠಡಿ ಪ್ರವೇಶಿಸಿ ಶಿಕ್ಷಕರ ಕುರ್ಚಿಯಲ್ಲಿ ವಿರಮಿಸುವುದು, ಶಿಕ್ಷಕರ ಬೆನ್ನ ಹಿಂದೆ ಕುಳಿತು ಚೇಷ್ಟೆ ಮಾಡುವುದು ಅದರ ಪರಿಪಾಠ. ಕೆಲವೊಮ್ಮೆ ಉಗ್ರ ಸ್ವರೂಪ ತಾಳಿ ಕಚ್ಚಲು ಬರುತ್ತದೆ. ವಿದ್ಯಾರ್ಥಿಗಳ ಬೆರಳನ್ನು ಕಚ್ಚಿ, ಮುಖದ ಮೇಲೆ ಪರಚಿ ಗಾಯಗೊಳಿಸಿದೆ ಎಂದು ಮುಖ್ಯಶಿಕ್ಷಕಿ ಶಾನಾಜ್ ಬಾನು ತಿಳಿಸಿದರು.
ಈಚೆಗೆ ಗ್ರಾಮದ ಯುವಕರು ಮುಸಿಯಾವನ್ನು ಹಿಡಿದು ಸೂಳೆಕೆರೆ ಅರಣ್ಯಕ್ಕೆ ಬಿಟ್ಟುಬಂದಿದ್ದರು. ಮತ್ತೆ ಬಂದು ತೊಂದರೆ ಕೊಡುತ್ತಿದೆ. ಶಾಲೆಯಲ್ಲಿ ಒಟ್ಟು 110 ವಿದ್ಯಾರ್ಥಿಗಳಿದ್ದು, ಮುಸಿಯಾ ಕಾಟದಿಂದ ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ. ಗ್ರಾಮದ ಅಂಗಡಿ, ಹೋಟೆಲ್ಗಳಿಗೆ ನುಗ್ಗುವ ಮುಸಿಯಾ ಕೈಗೆ ಸಿಕ್ಕಿದನ್ನು ಹಾಳು ಮಾಡುತ್ತದೆ. ರಸ್ತೆಯಲ್ಲಿ ಸಂಚರಿಸುವವರ ಮೇಲೆ ಹಾರಿ ಪರಚುತ್ತಿದೆ. ವಾಹನ ಸವಾರರ ಮೇಲೆ ಕುಳಿತು ಕಿರುಕುಳ ಕೊಡುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರ ಮುಸಿಯಾ ಸೆರೆ ಹಿಡಿಯಬೇಕು ಎಂದು ಸಮಾಜ ಸೇವಕ ಹೈದರ್ ಅಲಿ ಖಾನ್ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.