ಕಡರನಾಯ್ಕನಹಳ್ಳಿ: ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಮಳೆ ಸುರಿಯದ ಹಿನ್ನೆಲೆಯಲ್ಲಿ, ಕತ್ತೆಗಳ ಮದುವೆ ಮಾಡಲಾಯಿತು.
ಶನಿವಾರ ಈ ಭಾಗದ ಬಹುತೇಕ ಕಡೆ ಒಳ್ಳೆಯ ಮಳೆಯಾಗಿದೆ. ಆದರೆ ಹೊಳೆ ಸಿರಿಗೆರೆ ಗ್ರಾಮದಲ್ಲಿ ಈವರೆಗೂ ಸರಿಯಾಗಿ ಮಳೆ ಆಗಿಲ್ಲ. ಕತ್ತೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಮೇರೆಗೆ ಕತ್ತೆಗಳ ಮದುವೆ ಮಾಡಿದ್ದೇವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಲೇಶ್ ಕಣೇಕಲ್ ತಿಳಿಸಿದರು.
ಕತ್ತೆಗಳಿಗೆ ಮದುಮಕ್ಕಳಂತೆ ಅಲಂಕಾರ ಮಾಡಲಾಯಿತು. ಕತ್ತೆಗಳಿಗೆ ಬಾಸಿಂಗ ಕಟ್ಟಿ, ಕೊರಳಿಗೆ ಹೂಮಾಲೆ ಹಾಕಲಾಗಿತ್ತು. ಶ್ರೀ ಯೋಗಿ ನಾರೇಯಣ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಲಾಯಿತು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಎಲ್ಲ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಲಾಯಿತು ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಬಂಡೇರ ಪ್ರಭು, ಮುಖಂಡರಾದ ಕುಂದೂರು ಶಂಕ್ರಣ್ಣ, ಮಲ್ಲಾಡ್ರ ಪ್ರಭು, ಮಾಳಗಿ ಪ್ರಕಾಶ್, ಎಮ್. ಜಿ. ರಾಜಣ್ಣ, ಬ್ಯಾಲದಹಳ್ಳಿ ಶಿವಕುಮಾರ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.