ದಾವಣಗೆರೆ: ಅಪಸ್ಮಾರ(ಮೂರ್ಛೆ ರೋಗ) ಮೆದುಳಿಗೆ ಸಂಬಂಧಪಟ್ಟಂತಹ ಕಾಯಿಲೆಯಾಗಿದ್ದು, ಗಾಬರಿಯ ಅಗತ್ಯ ಇಲ್ಲ. ಆದರೆ, ಸಾಕಷ್ಟು ಎಚ್ಚರ ವಹಿಸಬೇಕು’ ಎಂದು ಎಸ್.ಎಸ್. ನಾರಾಯಣ ಹೆಲ್ತ್ ಸೆಂಟರ್ನ ನರರೋಗ ತಜ್ಞ ಡಾ. ವೀರಣ್ಣ ಗಡಾದ್ ತಿಳಿಸಿದರು.
ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಲ್ಲಿ ‘ಅಪಸ್ಮಾರ: ಗಾಬರಿ ಬೇಡ ಅರಿವಿರಲಿ' ವಿಷಯ ಕುರಿತು ಉಪನ್ಯಾಸ ನೀಡಿದರು.
‘ಅಪಸ್ಮಾರದಲ್ಲಿ ದೊಡ್ಡ ಮತ್ತು ಸಣ್ಣ ಪ್ರಮಾಣದಲ್ಲಿ ಕಾಯಿಲೆ ಕಾಣಿಸಿಕೊಳ್ಳಬಹುದು. ಅಪಘಾತ ವಿವಿಧ ಕಾರಣಗಳಿಂದ ಮಿದುಳಿನಲ್ಲಿ ನಂಜು, ಜ್ವರ, ರಕ್ತಸ್ರಾವ, ರಕ್ತಹೀನತೆ (ಪ್ಯಾರಾಲಿಸಿಸ್, ಲಕ್ವಾ), ಮೆದುಳಿನಲ್ಲಿ ಗಂಟು(ಬ್ರೈನ್ ಟ್ಯೂಮರ್), ಅನುವಂಶೀಯತೆ ಮುಂತಾದ ಕಾರಣಗಳಿಂದ ಅಪಸ್ಮಾರ ಬರುತ್ತದೆ’ ಎಂದು ತಿಳಿಸಿದರು.
‘ಇದ್ದಕ್ಕಿದ್ದಂತೆ ಮಾತನಾಡುವುದ ನಿಲ್ಲಿಸುವುದು, ಕೈಕಾಲು ಕುಣಿಸುವಂತಾಗುವುದು, ಕುತ್ತಿಗೆ ಶಟಿಸಿದಂತೆ ಮಾಡುವುದು, ಕಣ್ಣು ತಿರುಗಿಸುವುದು, ಎಚ್ಚರ ತಪ್ಪುವುದು ಅಪಸ್ಮಾರದ ಲಕ್ಷಣಗಳು’ ಎಂದು ತಿಳಿಸಿದರು.
‘ಅಪಸ್ಮಾರ ಕಾಣಿಸಿಕೊಂಡಾಗ ಸಂಬಂಧಿತರನ್ನು ಹೋಳು ಮಗ್ಗುಲಾಗಿಸಬೇಕು. ಸುತ್ತಮುತ್ತಲು ಇರುವಂತಹ ಸಾಮಾನು, ಪರಿಕರಗಳ ಸರಿಸಿ ವಿಶಾಲವಾದ ಜಾಗ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಅಪಸ್ಮಾರ ಕಾಣಿಸಿಕೊಂಡಾಗ ಬಾಯಿ, ಕೈಯಲ್ಲಿ ಕರವಸ್ತ್ರ, ಹತ್ತಿ ಇಡಬಾರದು. ನೀರು ಕುಡಿಸಬಾರದು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಚಿಕಿತ್ಸೆ ಕೊಡಿಸಬೇಕು’ ಎಂದು ತಿಳಿಸಿದರು.
ಕೇಂದ್ರದ ನಿರ್ದೇಶಕ ಡಾ. ಜಿ. ಗುರುಪ್ರಸಾದ್ , ಡಾ. ಪಿ.ಎಸ್. ಸುರೇಶ್ಬಾಬು, ಡಾ.ಎ.ಎಸ್. ಮೃತ್ಯುಂಜಯ, ಡಾ. ಎಸ್.ಎಸ್. ಪ್ರಕಾಶ್, ಡಾ.ಸಚಿನ್ ಬಾತಿ, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಅಂಜಲಿ, ನರ್ಸಿಂಗ್ ಪೋಷಕರು, ಆಸ್ಪತ್ರೆಯು ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.