ದಾವಣಗೆರೆ: ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗಾರಿಕಾ ವಲಯಕ್ಕೆ ನೀಡಿದ ಪ್ರೋತ್ಸಾಹವನ್ನು ರೈತ ವಲಯಕ್ಕೂ ನೀಡುವ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಬೇಕು ಎಂಬುದು ಎಂ.ಎಸ್.ರಾಮನಾಥನ್ ವರದಿಯ ಆಶಯವಾಗಿದೆ ಎಂದು ತಿಳಿಸಲಾಗಿದೆ.
‘ಸ್ವಾಮಿನಾಥನ್ ಅವರು ಹಸಿರು ಕ್ರಾಂತಿಯ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ಈ ಹಿಂದಿನ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರಗಳು ವರದಿಯನ್ನು ಜಾರಿಗೆ ತರುತ್ತೇವೆ ಎಂದು ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಾ ಬಂದಿವೆ’ ಎಂದು ರಾಜ್ಯ ರೈತ ಸಂಘದ ಮುಖಂಡರು ದೂರಿದ್ದಾರೆ.
‘ಇದೇ ರೀತಿ ಮುಂದುವರಿದರೆ ದೇಶದ 140 ಕೋಟಿ ಜನರಿಗೆ ಆಹಾರದ ಕೊರತೆ ಉಂಟಾಗಬಹುದು. ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿದರೆ, ಆಹಾರ ಭದ್ರತೆಯೊಂದಿಗೆ, ರೈತ ಕುಟುಂಬಗಳ ಭದ್ರತೆಗೂ ಸಹಕರಿಸಿದಂತಾಗುತ್ತದೆ’ ಎಂದು ಹೇಳಿದ್ದಾರೆ.
ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಘಟಕದ ಅಧ್ಯಕ್ಷ ರಾಂಪುರದ ಬಸವರಾಜ, ಕಾರ್ಯಾಧ್ಯಕ್ಷ ಮಾಯಕೊಂಡದ ಅಶೋಕ, ಸಂಘಟನಾ ಕಾರ್ಯದರ್ಶಿ ಮೀಯಾಪುರದ ತಿರುಮಲೇಶ್, ಮುಖಂಡರಾದ ಪ್ರತಾಪ್, ಎನ್.ಜಯನಾಯ್ಕ, ಚಂದ್ರಶೇಖರ್ ಬಾಡ, ಸಂತೋಷಕುಮಾರ್, ಕೆ.ಜಿ.ಹನುಮಂತಪ್ಪ, ಲಿಂಗರಾಜ, ಗೋವಿಂದಪ್ಪ, ಚಂದ್ರಪ್ಪ ಪತ್ರಕ್ಕೆ ಸಹಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.