ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನಾದ್ಯಂತ ಐದಾರು ದಿನಗಳಿಂದ ಮುಂಗಾರು ಹಂಗಾಮಿನ ಬೆಳೆಗಳ ಎಡೆಕುಂಟೆ ಹೊಡೆಯುವ ಕಾರ್ಯ ಭರದಿಂದ ಸಾಗಿದೆ.
ಅನಿಶ್ಚಿತತೆಯ ಮುಂಗಾರಿನ ನಡುವೆಯೇ ಈಗಾಗಲೇ ಬಿತ್ತನೆ ಮಾಡಿ ಹದಿನೈದು, ಇಪ್ಪತ್ತು ದಿನಗಳಾಗಿರುವ ಬೆಳೆಗಳ ಎಡೆಕುಂಟೆ ಹೊಡೆಯುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ಚನ್ನಗಿರಿ ಭಾಗದಲ್ಲಿ ನಾಲ್ಕೈದು ದಿನಗಳ ಹಿಂದೆ ಉತ್ತಮ ಮಳೆಯಾಗಿತ್ತು. ನಂತರ ಎರಡು ಬಾರಿ ಹಸಿ ಮಳೆಯಾಗಿದೆ. ಹೀಗಾಗಿ, ರೈತರು ಎಡೆಕುಂಟೆ ಹೊಡೆಯವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಳೆಗಳ ಮಧ್ಯೆ ಬೆಳೆದ ಕಳೆಗಳ ನಿರ್ಮೂಲನೆಗಾಗಿ ಎಡೆಕುಂಟೆ ಹೊಡೆಯುವುದು ಸಹಜ ಕ್ರಿಯೆಯಾಗಿದೆ. ತಾಲ್ಲೂಕಿನ ಸಂತೇಬೆನ್ನೂರು, ಬಸವಾಪಟ್ಟಣ ಹಾಗೂ ಕಸಬಾ ಹೋಬಳಿಗಳಲ್ಲಿ ಮಳೆಗಾಗಿ ರೈತರು ಮುಗಿಲು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗಗಳಲ್ಲಿ ವಾರದಿಂದ ಹಸಿ ಮಳೆಯಾಗಿಲ್ಲ.
ತಾಲ್ಲೂಕಿನಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ರಾಗಿ, ಹತ್ತಿ, ಈರುಳ್ಳಿ, ಅವರೆ, ಅಲಸಂದೆ, ತೊಗರಿ, ಭತ್ತ, ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.