ಹರಿಹರ: ನಗರದ ಹಳೇ ಭರಂಪುರದ ಶ್ರೀ ಗುರುಮೌನೇಶ್ವರಸ್ವಾಮಿ ದೇವಸ್ಥಾನದಲ್ಲಿ ಫೆ.20 ರಿಂದ 22ರವರೆಗೆ ದೇವತಾಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ಕಳಶಾರೋಹಣ, ಮಹಾಕುಂಭಾಭಿಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಕರ್ಮ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಾಚಾರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿಕ್ಕುಂಬಿ ನಾಗಲಿಂಗಸ್ವಾಮಿ ಮಠದ ಅಭಿನವ ನಾಗಲಿಂಗ ಶ್ರೀ, ಹುಲಗೂರು ಜೀವನ ಮುಕ್ತಾಲಯ ಕ್ಷೇತ್ರದ ಮೌನೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಫೆ.20ರಂದು ಬೆಳಿಗ್ಗೆ 8ಕ್ಕೆ ಧ್ವಜಾರೋಹಣ ಹಾಗೂ ವಿವಿಧ ಪೂಜಾ ವಿಧಿವಿಧಾನಗಳು ನೇರವೇರಿಸಲಾಗುವುದು ಎಂದರು.
ಫೆ.21ರ ಬುಧವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವತಾ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನಾ ಮತ್ತು ಪ್ರತಿಷ್ಠಾ ಹೋಮ, 11.30ಕ್ಕೆ ಉಭಯ ಶ್ರೀಗಳವರ ಅಮೃತ ಹಸ್ತದಿಂದ ಕಳಶಾರೋಹಣ ಮತ್ತು ಮಹಾಕುಂಭಾಭಿಷೇಕ ನಡೆಯಲಿದೆ.
ಸಂಜೆ 5ಕ್ಕೆ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಚಿದಾನಂದಪ್ಪ ಸೇರಿದಂತೆ ದಾವಣಗೆರೆ ಮತ್ತು ಹಾವೇರಿ ಜಿಲ್ಲೆ ಹಾಗೂ ತಾಲ್ಲೂಕು ಘಟಕಗಳ ವಿಶ್ವಕರ್ಮ ಸಮಾಜದ ಅಧ್ಯಕ್ಷರು ಭಾಗವಹಿಸಲಿದ್ದಾರೆ. ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಾಚಾರ್ ಅಧ್ಯಕ್ಷತೆ ವಹಿಸುವರು.
ಫೆ.22ರ ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಜವಳ, ಉಪನಯನ, ಮತ್ತು ಸಾಮೂಹಿಕ ವಿವಾಹಗಳು ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಗುರು ಮೌನೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಜರುಗಲಿದೆ. ನಾಗಲಿಂಗ ಶ್ರೀ ಹಾಗೂ ಮೌನೇಶ್ವರ ಶ್ರೀಗಳ ಸಾನಿಧ್ಯದಲ್ಲಿ ಬೆಳಗ್ಗೆ 10ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮುಖಂಡರಾದ ನಂದಿಗಾವಿ ಶ್ರೀನಿವಾಸ, ಬಿ.ಎಂ.ವಾಗೀಶಸ್ವಾಮಿ, ಚಿದಾನಂದಪ್ಪ, ಚಂದ್ರಶೇಖರ ಪೂಜಾರ್ ಹಾಗೂ ಇತರರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
ಉಪಾಧ್ಯಕ್ಷ ಡಿ.ಪಿ.ರಾಜಾಚಾರ್ಯ, ಕಾರ್ಯದರ್ಶಿ ಬಿ.ಎಸ್.ನಾಗರಾಜಾಚಾರ್, ಸಹಕಾರ್ಯದರ್ಶಿ ಕೆ.ಎನ್.ವೀರಾಚಾರ್, ಗಂಗಾಧರಾಚಾರ್, ಬಿ.ವಿ.ಮೌನೇಶ್ವರಾಚಾರ್, ತಿಪ್ಪೇಶಾಚಾರ್ ಭಾನುವಳ್ಳಿ, ಬಸವರಾಜ ಹನಗವಾಡಿ, ಮಂಜುನಾಥಾಚಾರ್ ಕೊಂಡಜ್ಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.