ADVERTISEMENT

ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರಕ್ಕೆ ರೈತರ ಸಂಕಷ್ಟದ ಅರಿವಿಲ್ಲ

ಹರಿಹರ: ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 16:30 IST
Last Updated 17 ಆಗಸ್ಟ್ 2024, 16:30 IST
ಹರಿಹರದಲ್ಲಿ ಶನಿವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹರಿಹರ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿದರು
ಹರಿಹರದಲ್ಲಿ ಶನಿವಾರ ನಡೆದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹರಿಹರ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ ಮಾತನಾಡಿದರು   

ಹರಿಹರ: ಉದ್ಯಮಿಗಳ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಸಾಲ ಮನ್ನಾಕ್ಕೆ ಮುಂದಾಗದಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್ ಆರೋಪಿಸಿದರು.

ನಗರದ ಎಪಿಎಂಸಿ ವಸತಿ ನಿಲಯದಲ್ಲಿ ಶನಿವಾರ ನಡೆದ ಹರಿಹರ ತಾಲ್ಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಉದ್ಯಮಿಗಳು ತೆರಿಗೆ ಪಾವತಿಸುತ್ತಾರೆ, ಹೀಗಾಗಿ ಅವರ ಸಾಲ ಮನ್ನಾ ಮಾಡುತ್ತೇವೆ ಎಂಬ ಭಾವನೆ ಕೇಂದ್ರ ಸರ್ಕಾರಕ್ಕಿದೆ. ರೈತರು ಕ್ರಿಮಿನಾಶಕ, ಗೊಬ್ಬರ, ವಿವಿಧ ಕೃಷಿ ಉಪಕರಣಗಳನ್ನು ಖರೀದಿಸಿದಾಗಲೂ ತೆರಿಗೆ ಪಾವತಿಸುತ್ತಾರೆ. ರೈತರ ಕುರಿತು ಕೇಂದ್ರ ಸರ್ಕಾರ ತಾತ್ಸಾರ ಭಾವನೆ ಹೊಂದಿದೆ ಎಂದು ಅವರು ಟೀಕಿಸಿದರು.

ADVERTISEMENT

ರೈತರು ಸಂಘಟಿತರಾಗಿ ಹೋರಾಟ ಮಾಡಿ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ತಾಲ್ಲೂಕಿನ ಹೊಸ ಸಮಿತಿಯವರು ಮಾಡುವ ಹೋರಾಟಗಳಿಗೆ ನಮ್ಮ ಬೆಂಬಲವಿದೆ ಎಂದರು.

ತಾಲ್ಲೂಕಿನ ಭದ್ರಾ ಹಾಗೂ ದೇವರಬೆಳೆಕೆರೆ ಕಾಲುವೆಗಳು ಒಡೆದಿವೆ, ಹೂಳು ತುಂಬಿವೆ. ಸ್ಥಳೀಯ ಜನಪ್ರತಿನಿಧಿಗಳು ಕೊನೆ ಭಾಗದ ರೈತರಿಗೂ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹರಿಹರ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಪ್ರಭುಗೌಡ ಹೇಳಿದರು.

ಪದಾಧಿಕಾರಿಗಳ ಆಯ್ಕೆ: ಕರ್ನಾಟಕ ರಾಜ್ಯರೈತ ಸಂಘ ಮತ್ತು ಹಸಿರು ಸೇನೆಯ ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಿ.ಪ್ರಭುಗೌಡ ಕೆ.ಎನ್.ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಗುತ್ತೂರು ಗರಡಿಮನಿ ಬಸಣ್ಣ, ಉಪಾಧ್ಯಕ್ಷರಾಗಿ ಆಂಜಿನಪ್ಪ ಹಾಲಿವಾಣ, ಟಿ.ರಾಜಣ್ಣ, ಮಲೆಬೆನ್ನೂರು ಬಿ.ಮಹಮ್ಮದ್ ಹಸೀಫ್ ಸಾಬ್, ಸಂಚಾಲಕರಾಗಿ ಜಿ.ಎಸ್.ಮಲ್ಲೇಶಪ ಜಿ.ಟಿ.ಕಟ್ಟೆ ಅವರನ್ನು ನೇಮಿಸಲಾಗಿದೆ.

ಹಸೀರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಎಂ.ಬಸಪ್ಪ, ಮಲೇಬೆನ್ನೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಎಂ.ಮಂಜಪ್ಪ ಜಿ.ಟಿ.ಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯಪ್ಪ, ಹರಿಹರ ಕಸಬಾ ಹೋಬಳಿ ಘಟಕದ ಅಧ್ಯಕ್ಷರಾಗಿ ಮಾರುತಿರಾವ್ ಪಾಮೇನಹಳ್ಳಿ ಆಯ್ಕೆಯಾದರು.

ರೈತ ಮುಖಂಡರಾದ ಎಂ.ಬಿ ಪಾಟೀಲ್, ರುದ್ರಗೌಡ ಪಾಳ್ಯ, ನಿಜಗುಣ ಹಿಂಡಸಘಟ್ಟ, ಹುಚ್ಚುರಾಯಪ್ಪ ಕೊಕ್ಕನೂರು, ದೊಗ್ಗಳ್ಳಿ ಮಹೇಶ್ ಬಣಕಾರ್, ಲೋಕೇಶ್ ಕೆ.ಎನ್.ಹಳ್ಳಿ, ಮಹೇಶಪ್ಪ ಹಾಲಿವಾಣ, ನಂದಿಗಾವಿ ಗೋವಿಂದ್ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.