ಹರಿಹರ: ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿರುವ ತಾಲ್ಲೂಕಿನ ಗುತ್ತೂರು ಗ್ರಾಮದ ಸ್ಮಶಾನ ಜಲಾವೃತವಾಗಿದ್ದು, ಗುರುವಾರ ಮೃತಪಟ್ಟ ವ್ಯಕ್ತಿಯೊಬ್ಬರು ಅಂತ್ಯಕ್ರಿಯೆಗೆ ಗ್ರಾಮಸ್ಥರು ಪರದಾಡುವಂತಾಯಿತು.
ಗ್ರಾಮದ ನಿವಾಸಿ ಎಚ್.ಎಂ.ಸಿ. ಮಂಜಪ್ಪ (70) ಗುರುವಾರ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಮಾಡಬೇಕಾದ ಸ್ಮಶಾನ ಜಲಾವೃತವಾಗಿತ್ತು. ನದಿಯಲ್ಲೇ ಶವ ಹೊತ್ತು ಸಾಗಿದ ಗ್ರಾಮಸ್ಥರು ಪಕ್ಕದಲ್ಲಿರುವ ಸಣ್ಣ ಗುಡ್ಡದ ಮೇಲೆ ಅಂತ್ಯಕ್ರಿಯೆ ನೆರವೇರಿಸಿದರು.
ನದಿ ತುಂಬಿ ಹರಿಯುತ್ತಿದ್ದು, ಸ್ಮಶಾನ ಜಾಗೆಯೂ ನೀರಿನಿಂದ ಆವೃತವಾಗಿದ್ದರಿಂದ ಈಜು ಬಲ್ಲ ಕೆಲ ಯುವಕರು ಶವವನ್ನು ಹೊತ್ತುಕೊಂಡು ನದಿ ನೀರಿನಲ್ಲೇ ಸಾಗಿ ನೆರವಾದರು. ಮಹಿಳೆಯರು ಹಾಗೂ ಈಜು ಬಾರದವರು ನದಿಯ ಈ ಭಾಗದಲ್ಲಿ ನಿಂತು ಶವ ಸಂಸ್ಕಾರದ ಪ್ರಕ್ರಿಯೆ ವೀಕ್ಷಿಸಿದರು.
ಅಕ್ರಮ ಮಣ್ಣುಗಾರಿಕೆ ಕಾರಣ:
ಗುತ್ತೂರು ಹಾಗೂ ಸುತ್ತಲಿನ ಪ್ರದೇಶದ ನದಿ ತೀರದಲ್ಲಿ ಅಕ್ರಮವಾಗಿ ಮಣ್ಣು, ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆದಿರುವುದೇ ನದಿ ದಡದಲ್ಲಿರುವ ಸ್ಮಶಾನ ಜಲಾವೃತವಾಗಲು ಕಾರಣ. ಈಗೀಗ ನದಿ ನೀರು ಸ್ಮಶಾನಕ್ಕೇ ನುಗ್ಗುತ್ತದೆ. ಅಂತ್ಯಸಂಸ್ಕಾರಕ್ಕೆ ಬೇರೆ ಸ್ಥಳ ನಿಗದಿ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.