ಹರಿಹರ: ದಕ್ಷಿಣ ಕಾಶಿ ಎನಿಸಿರುವ ಇಲ್ಲಿನ ಹರಿಹರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಶಾಸಕ ಬಿ.ಪಿ.ಹರೀಶ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಿಂದ ಶಿವಮೊಗ್ಗ ವೃತ್ತದವರೆಗೆ ತೇರನ್ನು ಎಳೆಯಲಾಯಿತು. ‘ಹರಹರ ಮಹಾದೇವ್, ‘ಗೋವಿಂದಾ... ಗೋವಿಂದಾ...’ ಎಂಬ ಘೋಷವಾಕ್ಯಗಳು ಮುಗಿಲು ಮುಟ್ಟಿದವು.
ತೇರಿನ ಮುಕುಟಕ್ಕೆ ಬಾಳೆಹಣ್ಣು, ಹೂವು, ಉತ್ತುತ್ತಿ ಎಸೆದು, ತೇರಿನ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ತಹಶೀಲ್ದಾರ್ ಕೆ.ಎಂ.ಗುರುಬಸವರಾಜ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿ ಮುಖಂಡ ಎಸ್.ಎಂ.ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ನಗರಸಭೆ ಸದಸ್ಯರು, ದೇವಸ್ಥಾನ ಸಮಿತಿ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ರಥೋತ್ಸವಕ್ಕೂ ಮುನ್ನ ಹರಿಹರೇಶ್ವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ರಥದೊಳಗೆ ಅಲಂಕರಿಸಲಾಯಿತು. ರಥೋತ್ಸವದಲ್ಲಿ ಸರ್ವ, ಧರ್ಮಿಯರೂ ಪಾಲೊಂಡಿದ್ದು ಗಮನ ಸೆಳೆಯಿತು. ರಥೋತ್ಸವದಲ್ಲಿ ನಗರ ಹಾಗೂ ತಾಲ್ಲೂಕಿನ ವಿವಿಧ ಭಾಗಗಳಿಂದ ದಾಸ ಪರಂಪರೆ ಅನುಯಾಯಿಗಳು ಶ್ವೇತವಸ್ತ್ರ ಧಾರಿಗಳಾಗಿ ಭಾಗಿಯಾಗಿ ಕೀರ್ತನೆಗಳನ್ನು ಹಾಡಿದ್ದು ಜನಮನ ಸೆಳೆಯಿತು. ಭಕ್ತರಿಗೆ ಅನ್ನಸಂತರ್ಪಣೆ, ಮಜ್ಜಿಗೆ, ಪಾನಕ ವಿತರಿಸಲಾಯಿತು.
ಮೈಲಾರ ಜಾತ್ರೆಗೆ ತೆರಳುವ ಮತ್ತು ಅಲ್ಲಿಂದ ವಾಪಸಾಗುವ ಭಕ್ತರು ಹರಿಹರೇಶ್ವರನ ದರ್ಶನ ಪಡೆಯುವುದು ವಾಡಿಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.