ಹರಿಹರ: ‘ದೇಶದಲ್ಲಿ ತಾರತಮ್ಯದಿಂದ ಕೂಡಿರುವ ಶ್ರೇಣೀಕೃತ ಜಾತಿ ವ್ಯವಸ್ಥೆ ಇಂದಿಗೂ ಜೀವಂತವಾಗಿದೆ’ ಎಂದು ಮಂಗಳವಾರ ವಾಲ್ಮೀಕಿ ಗುರುಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.
ಹರಿಹರದಲ್ಲಿ ಮಂಗಳವಾರ ನಡೆದ 13ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಾಂಸ್ಕೃತಿಕ ನಾಯಕರಾಗಿ ಬಸವಣ್ಣ’ ಕುರಿತು ನಡೆದ ಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ದಾರ್ಶನಿಕರ ಬದುಕು ಘಟನೆಯಿಂದ ಕೂಡಿರುತ್ತದೆ. ದೇವರು ಧರ್ಮದ ಹೆಸರಿನಲ್ಲಿ ಕ್ರೌರ್ಯ, ಯುದ್ಧ ಜಗಳ ಕಾದಾಟ ಮುಂದುವರಿದಿದೆ. ಸಮ ಸಮಾಜ ನಿರ್ಮಾಣದ ಕನಸು, ಜಾತಿಗಿಂತ ನೀತಿ ಮುಖ್ಯ ಎಂಬುದನ್ನು ಬಸವಣ್ಣನವರ ವಚನದಲ್ಲಿ ಕಾಣಬಹುದು. ದೇವರಲ್ಲಿ ಭೇದ ಭಾವ ಇದೆ. ಆದರೆ ಬಸವಣ್ಣ ದೇವರನ್ನು ಮನಸ್ಸಿನಲ್ಲಿ ಸಾಕ್ಷಾತ್ಕಾರ ಮಾಡಿಕೊಂಡ, ಸಮಾಜ ಸುಧಾರಣೆ ಮಾಡಿದ ಮಹಾನ್ ಚೇತನ.
ಆದ್ದರಿಂದ ಸರ್ಕಾರ ತಡವಾಗಿಯಾದರೂ ಎಚ್ಚೆತ್ತು ಸಾಂಸ್ಕೃತಿಕ ನಾಯಕನ್ನಾಗಿ ಕರೆದಿದೆ’ ಎಂದು ಹೇಳಿದರು.
‘ಜಾತಿ, ಮತ, ಭೇದವಿಲ್ಲದೆ ಅನ್ನ – ಜ್ಞಾನ ದಾಸೋಹ ನೀಡಿ ತುಳಿತಕ್ಕೆ ಒಳಗಾದ ಸಮಾಜಕ್ಕೆ ಗೌರಯುತ ಬದುಕು ರೂಪಿಸಿಕೊಟ್ಟವರು ಬಸವಣ್ಣ’ ಎಂದು ಯಲವಟ್ಟಿ ಗುರುಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಹೇಳಿದರು.
‘12ನೇ ಶತಮಾನದಲ್ಲಿ ಚಾತುರ್ವರ್ಣ ಪದ್ದತಿ ವಿರೋಧಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಕಾಶ ದೀಪವಾಗಿ ಬೆಳಕು ತೋರಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ’ ಎಂದು ವೀರಶೈವ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪ್ರತಿಪಾದಿಸಿದರು.
‘ಜಾತೀಯತೆ ನಿರ್ಮೂಲನೆ ಮಾಡಿ ಸಾಮಾಜಿಕ ಕ್ರಾಂತಿ ಮಾಡಿದ ಹರಿಕಾರ, ಕರುಣಾಮಯಿ. ವಿಪರ್ಯಾಸವೆಂದರೆ ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆ ತಾಂಡವವಾಡುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.