ADVERTISEMENT

ಬಿಜೆಪಿಗೆ ಮತ ನೀಡಿದರೆ ಭಾರತ ವಿನಾಶ: ಡಿ.ಬಸವರಾಜ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2024, 15:56 IST
Last Updated 19 ಮಾರ್ಚ್ 2024, 15:56 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ‘ಪ್ರಧಾನಿ ನರೇಂದ್ರ ಮೋದಿ ಅವರು ವಿಕಸಿತ ಭಾರತಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿಗೆ ಮತ್ತೆ ಮತ ನೀಡಿದರೆ ಭಾರತ ವಿನಾಶ ಆಗುತ್ತದೆ’ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಟೀಕಿಸಿದರು.

‘ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳನ್ನು ಕದ್ದು ಮತಭಿಕ್ಷೆಗೆ ಮುಂದಾಗಿರುವ ನರೇಂದ್ರ ಮೋದಿ ಅವರಿಗೆ ಈ ಬಾರಿ ಮತದಾರರು ಸೋಲಿನ ರುಚಿ ತೋರಿಸಲಿದ್ದಾರೆ. ಅವರ ಸಾಧನೆ ಶೂನ್ಯವಾಗಿದ್ದು, ಸದ್ದು ಮಾತ್ರ ಜೋರಾಗಿದೆ’ ಎಂದು ನಗರದಲ್ಲಿ ಮಂಗಳವಾರ ಕಿಡಿಕಾರಿದರು.

‘ಬಿಜೆಪಿ ಅಭ್ಯರ್ಥಿಗಳನ್ನು ಅವರದ್ದೇ ಪಕ್ಷದ ಮುಖಂಡರು, ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಅಭ್ಯರ್ಥಿಗಳು ತಮ್ಮ ಸಾಧನೆ ಅಥವಾ ಪಕ್ಷದ ಬಗ್ಗೆ ಹೇಳುತ್ತಿಲ್ಲ. 3ನೇ ಸಲ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ಹೇಳಿಕೊಳ್ಳಲು ಅವರಲ್ಲಿ ಏನೂ ಇಲ್ಲ’ ಎಂದು ಹೇಳಿದರು.

ADVERTISEMENT

‘ಅಂಬಾನಿ-ಅದಾನಿ ಭಕ್ತನಾಗಿರುವ ಪ್ರಧಾನಿ ಮೋದಿ ಸೂಟು ಬೂಟು ಹಾಕಿಕೊಂಡು ಫ್ಯಾಷನ್ ಶೋಗೆ ಬಂದಂತೆ ಚುನಾವಣೆ ರ‍್ಯಾಲಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನ ಸಮಸ್ಯೆಗೆ ಸಿಲುಕಿದ್ದಾಗ ಬಾರದ ಮೋದಿ, ಇದೀಗ ಚುನಾವಣಾ ಪ್ರಚಾರಕ್ಕೆ ಪದೇ ಪದೇ ಬರುತ್ತಿದ್ದಾರೆ’ ಎಂದು ದೂರಿದರು.

‘ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ದೇಶದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಧಿಕಾರಕ್ಕೆ ಬರಲಿದೆ. ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಬಳಿಕ ದೇಶದ ಜನರ ಮುಂದೆ ಮೋದಿ ಬೆತ್ತಲೆಯಾಗಿದ್ದಾರೆ’ ಎಂದು ಅವರು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಸ್.ಎಂ.ಜಯಪ್ರಕಾಶ್, ಮೊಹಮ್ಮದ್ ಜಿಕ್ರಿಯಾ, ಬಿ.ವಿನಾಯಕ, ಎಂ.ಕೆ. ಲಿಯಾಕತ್ ಅಲಿ, ಡಿ.ಶಿವಕುಮಾರ್, ಬಿ. ಎಸ್. ಸುರೇಶ್, ಮುಬಾರಕ್, ಕಿರಣ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.