ದಾವಣಗೆರೆ: ಇಲ್ಲಿನ ಜಯನಗರದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸಿಂಥೆಟಿಕ್ ನೆಲಹಾಸು ಹೊಂದಿದ ಎಆರ್ಎಸ್ ಬ್ಯಾಂಡ್ಮಿಟನ್ ಅರೇನಾ ಒಳಾಂಗಣ ಕ್ರೀಡಾಂಗಣ ಭಾನುವಾರ ಉದ್ಘಾಟನೆಗೊಂಡಿತು.
ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಅವರು ಕ್ರೀಡಾಂಗಣ ಉದ್ಘಾಟಿಸಿದರು. ಸುಸಜ್ಜಿತವಾದ ಕ್ರೀಡಾಂಗಣದಲ್ಲಿ ಮೂರು ಅಂಕಣಗಳಿದ್ದು, ನಿತ್ಯ ಬೆಳಿಗ್ಗೆ 5ರಿಂದ ರಾತ್ರಿ 11ರವರೆಗೆ ಕ್ರೀಡಾ ಚಟುವಟಿಕೆಗಳು ನಡೆಯಲಿವೆ.
ಕ್ರೀಡಾ ಪ್ರೇಮಿಗಳಾದ ರೂಪೇಶ್ಕುಮಾರ್ ಮತ್ತು ಆಕಾಶ್ ಈ ಕ್ರೀಡಾಂಗಣ ರೂಪಿಸಿದ್ದಾರೆ. ಆಟ, ತರಬೇತಿ ಹಾಗೂ ಟೂರ್ನಿಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. 10 ವರ್ಷದ ಮಕ್ಕಳಿಂದ ವೃದ್ಧರವರೆಗೆ ಎಲ್ಲ ವಯೋಮಾನದವರಿಗೂ ಇಲ್ಲಿ ಮುಕ್ತ ಅವಕಾಶವಿದೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ಅವಧಿ ನಿಗದಿಪಡಿಸುವ ಸಾಧ್ಯತೆ ಇದೆ.
60X90 ಅಡಿ ಸ್ಥಳದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಬ್ಯಾಡ್ಮಿಂಟನ್ನ ಮೂರು ಅಂಕಣಗಳಿಗೆ 50X70 ಜಾಗ ಬಳಕೆಯಾಗಿದೆ. ಅಂಕಣದ ಸುತ್ತ ಕ್ರೀಡೆ ವೀಕ್ಷಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಡೆಸ್ಸಿಂಗ್ ಕೊಠಡಿ, ಶೌಚಾಲಯ ಸೇರಿ ಅಗತ್ಯ ಸೌಲಭ್ಯಗಳಿವೆ.
‘ಎಸ್.ಎಸ್. ಬಡಾವಣೆಯಲ್ಲಿದ್ದ ಬ್ಯಾಡ್ಮಿಂಟನ್ ಕ್ರೀಡಾಂಗಣ ದೂರವಾಗುತ್ತಿತ್ತು. ಜನರ ಬೇಡಿಕೆಯನ್ನು ಅರಿತು ಜಯನಗರದಲ್ಲಿ ನೂತನ ಅಂಕಣ ನಿರ್ಮಾಣಕ್ಕೆ ಮುಂದಾದೆವು. ಬಯಲು ಪ್ರದೇಶದಲ್ಲಿ ಆಟವಾಡುತ್ತಿದ್ದ ಅನೇಕರು ಒಳಾಂಗಣ ಕ್ರೀಡಾಂಗಣದ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟರು. ತರಬೇತಿ ಪಡೆಯಲು ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಸಕ್ತಿ ತೋರಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿವವರು ಬ್ಯಾಡ್ಮಿಂಟನ್ಗೆ ಕ್ರೀಡಾಂಗಣಕ್ಕೆ ಬರಲು ಉತ್ಸುಕರಾಗಿದ್ದಾರೆ’ ಎಂದು ರೂಪೇಶ್ಕುಮಾರ್ ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ಬ್ಯಾಡ್ಮಿಂಟನ್ ಸಂಘದ ಅಧ್ಯಕ್ಷ ಎಸ್.ಎನ್. ಬಸವರಾಜ್, ಗೌರವಾಧ್ಯಕ್ಷ ಶಿವಗಂಗಾ ಶ್ರೀನಿವಾಸ್, ಕಾರ್ಯದರ್ಶಿ ಡಿ.ಆರ್.ಗಿರಿರಾಜ್, ಸಿದ್ದೇಶ್, ಶಶಿಧರ್, ಡಿ.ಬಿ. ಮನೋಜ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.