ಜಗಳೂರು: ಗ್ರಾಮೀಣ ಭಾಗದ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಮೇಳಗಳು ವರದಾನವಾಗಲಿವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಪಟ್ಟಣದ ನಾಲಂದ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಶನಿವಾರ ಜಿ.ಮಲ್ಲಿಕಾರ್ಜುನಪ್ಪ ಅವರ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದಿನ ಉದ್ಯೋಗಮೇಳದಲ್ಲಿ 50 ಬಹುರಾಷ್ಟ್ರೀಯ ಕಂಪನಿಗಳು ಭಾಗವಹಿಸಿವೆ. ಉದ್ಯೋಗ ಮೇಳದಲ್ಲಿ ಭಾಗವಹಿಸಿ ಸಂದರ್ಶನದಲ್ಲಿ ಆಯ್ಕೆಯಾದ ಉದ್ಯೋಗ ಆಕಾಂಕ್ಷಿಗಳಿಗೆ ಕನಿಷ್ಠ 20 ಸಾವಿರಕ್ಕೂ ಹೆಚ್ಚು ವೇತನ ನೀಡಬೇಕು. ತಮ್ಮ ಕಂಪನಿಗಳಲ್ಲಿ ವಿದ್ಯಾರ್ಹತೆ ಹಾಗೂ ಪ್ರತಿಭೆಗಳಿಗೆ ತಕ್ಕಂತೆ ಹುದ್ದೆ ಹಾಗೂ ವೇತನ ಒದಗಿಸಬೇಕು. ತಾಲ್ಲೂಕಿನಲ್ಲಿ ವಿವಿಧ ಪದವಿ, ವೃತ್ತಿಪರ ಕೋರ್ಸ್ಗಳನ್ನು ಪಡೆದು ಉದ್ಯೋಗ ಅರಸುತ್ತಿರುವ ನಿರುದ್ಯೋಗಿಗಳು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಬಿಜೆಪಿ ಆಡಳಿತಾವಧಿಯಲ್ಲಿ ತಾಲ್ಲೂಕಿಗೆ ನೀರಾವರಿ ಸೌಲಭ್ಯ ಸೇರಿದಂತೆ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿದ್ದೇವೆ. ನಮ್ಮ ತಂದೆ ಮಲ್ಲಿಕಾರ್ಜುನಪ್ಪ ಅವರ ಆಡಳಿತಾವಧಿಯಲ್ಲಿ ಶಾಂತಿಸಾಗರದಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡಲಾಗಿತ್ತು. ನಮ್ಮ ಕುಟುಂಬದಮೇಲೆ ವಿಶ್ವಾಸ ಹೊಂದಿರುವ ಜಗಳೂರು ಜನತೆಗೆ ನಾನು ಸದಾ ಚಿರ ಋಣಿಯಾಗಿರುವೆ’ ಎಂದರು.
‘ನನ್ನ ಆಡಳಿತಾವಧಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಸಹಕಾರದಿಂದ ತಾಲ್ಲೂಕಿನ ಸಮಗ್ರ ಅಭಿವೃದ್ದಿ ಸಂಕಲ್ಪದಿಂದ ಕನಸಿನ 57 ಕೆರೆ ತುಂಬಿಸುವ ಯೋಜನೆ,ಭದ್ರಾಮೇಲ್ದಂಡೆ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು, ಶೀಘ್ರ ಬರದನಾಡು ಹಸಿರು ನಾಡಾಗಲಿದೆ. ಪ್ರಸಕ್ತ ಸಾಲಿನಲ್ಲಿ ಬರ ಆವರಿಸಿದ್ದು, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು’ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಸಲಹೆ ನೀಡಿದರು.
ಸಂಸದ ಜಿಎಂಸಿದ್ದೇಶ್ವರ ಪುತ್ರ ಅನಿತ್ ಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸೊಕ್ಕೆ ನಾಗರಾಜ್, ಎಸ್.ಕೆ.ಮಂಜುನಾಥ್, ಮುಖಂಡರಾದ ಶಶಿಧರ್, ಕೃಷ್ಣಮೂರ್ತಿ, ನಾಲಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ಪಟ್ಟಣ ಪಂಚಾಯಿತಿ ಸದಸ್ಯರಾದ ನಿರ್ಮಲಕುಮಾರಿ, ತಿಪ್ಪೇಸ್ವಾಮಿ, ನವೀನ್ ಕುಮಾರ್, ಪಾಪಲಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.