ಕಡರನಾಯ್ಕನಹಳ್ಳಿ: ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಸೋಮವಾರ ಮಹರ್ಷಿ ವಾಲ್ಮೀಕಿ ನಾಮಫಲಕ ಮತ್ತು ವೀರ ಮದಕರಿ ಮಹಾದ್ವಾರವನ್ನು ಜಿಲ್ಲಾಧಿಕಾರಿಯ ಆದೇಶ ಮತ್ತು ಸತ್ಯಶೋಧನಾ ಸಮಿತಿ ವರದಿ ಆಧರಿಸಿ ಬಿಗಿ ಪೊಲೀಸ್ ಬಂದೋಬಸ್ತ್ನೊಂದಿಗೆ ತೆರವುಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸಂಗೊಳ್ಳಿರಾಯಣ್ಣ ಪ್ರತಿಮೆ ಪುನರ್ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬೇಕು. ಅನಧಿಕೃತವಾಗಿ ನಿರ್ಮಿಸಲಾದ ಮದಕರಿನಾಯಕ ಮಹಾದ್ವಾರ ಮತ್ತು ಮಹರ್ಷಿ ವಾಲ್ಮೀಕಿ ನಾಮಫಲಕ ತೆರವುಗೊಳಿಸಬೇಕು ಎಂದು ಹಾಲುಮತ ಸಮಾಜದವರು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದರು.
ಜಿಲ್ಲಾಧಿಕಾರಿಯು 13 ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದರು. ತೆರವಿಗೆ ಅಡ್ಡಿಪಡಿಸಿದ 30 ಜನರನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಹಾಲುಮತ ಸಮಾಜದವರು ಧರಣಿಯನ್ನು ಅಂತ್ಯಗೊಳಿಸಿದರು.
ಮಾರ್ಚ್ 15ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಗ್ರಾಮದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. 50ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಎಎಸ್ಪಿ ವಿಜಯ್ ಕುಮಾರ್ ಸಂತೋಷ್, ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್, ಗ್ರಾಮಾಂತರ ಸಿಪಿಐ ಪ್ರಶಾಂತ್ ಸಗರಿ, ಮಲೇಬೆನ್ನೂರು ಪಿಎಸ್ಐ ಪ್ರಭು ಡಿ. ಇದ್ದರು.
ಪ್ರತಿಭಟನೆ ಹಿನ್ನೆಲೆ ಈ ಹಿಂದೆ ಹಾಲುಮತ ಸಮಾಜದವರು ಗ್ರಾಮದ ಮದಕರಿನಾಯಕ ಮಹಾದ್ವಾರದ ಅನತಿ ದೂರದಲ್ಲಿರುವ ಸಿದ್ದಪ್ಪ ಎಂಬುವವರ ಮನೆಯ ಮುಂದೆ ಸಂಗೊಳ್ಳಿರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದರು. ಅದನ್ನು ತೆರವುಗೊಳಿಸಲು ಗ್ರಾಮದ ವಾಲ್ಮೀಕಿ ಸಮಾಜದವರು ಅಹೋರಾತ್ರಿ ಧರಣಿ ಕೈಗೊಂಡಿದ್ದರು. ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಮಾಡಿ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸಿತ್ತು. ಪ್ರತಿಯಾಗಿ ಅನಧಿಕೃತವಾಗಿ ನಿರ್ಮಿಸಿದ ಮದಕರಿ ನಾಯಕ ಮಹಾದ್ವಾರ ಮತ್ತು ಮಹರ್ಷಿ ವಾಲ್ಮೀಕಿ ನಾಮಫಲಕ ತೆರವುಗೊಳಿಸಬೇಕು ಎಂದು ಹಾಲುಮತ ಸಮಾಜದವರು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.