ಕಡರನಾಯ್ಕನಹಳ್ಳಿ: ಸಮೀಪದ ಭಾನುವಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪುನರ್ಸ್ಥಾಪನೆ ಮತ್ತು ಮದಕರಿನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ಮಹರ್ಷಿ ನಾಮಫಲಕ ತೆರವುಗೊಳಿಸಲು ಆಗ್ರಹಿಸಿ ಹಾಲುಮತ ಸಮಾಜದವರು ಮಂಗಳವಾರ ಸಂಜೆಯಿಂದ ಪ್ರತಿಭಟನೆ ನಡೆಸುತ್ತಿದ್ದು, ಬುಧವಾರವೂ ಮುಂದುವರಿಯಿತು.
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ. ಮದಕರಿನಾಯಕ ಮಹಾದ್ವಾರ ಮತ್ತು ವಾಲ್ಮೀಕಿ ಮಹರ್ಷಿ ನಾಮಫಲಕ ತೆರವು ಬಗ್ಗೆ ಉಲ್ಲೇಖಿಸಿಲ್ಲ ಎಂದು ಆರೋಪಿಸಿ ಸಮುದಾಯದವರು ಧರಣಿ ನಡೆಸಿದರು.
ವರದಿಯ ಬಗ್ಗೆ ವಿಷಯ ಹರಡುತ್ತಿದ್ದಂತೆ ಸುತ್ತಲಿನ ಜನರು ಧರಣಿ ಸ್ಥಳದಲ್ಲಿ ಜಮಾಯಿಸಿದರು. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು.
ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್, ಸಿಪಿಐ ಪ್ರಶಾಂತ್ ಸಗರಿ, ಪಿಎಸ್ಐ ಪ್ರಭು ಡಿ. ಸೇರಿದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕೆಲಕಾಲ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಸ್ಥಳಕ್ಕೆ ಬಂದ ಎಎಸ್ಪಿ ವಿಜಯಕುಮಾರ್ ಸಂತೋಷ್, ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಧರಣಿ ನಿರತರಿಗೆ ಸೂಚಿಸಿದರು.
‘ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ನಡೆಸುತ್ತೇವೆ’ ಎಂದು ಧರಣಿ ನಿರತರು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕನ್ನಪ್ಪ, ಮುಖಂಡರಾದ ಯು.ಕೆ. ಅಣ್ಣಪ್ಪ, ಎಚ್.ಎಸ್. ಕರಿಯಪ್ಪ, ಬಿ.ಎನ್. ಕೆಂಚಪ್ಪ, ಹೇಮಂತ್ ರಾಜ್, ಕೆ. ಗೋವಿಂದ, ಡಿ. ಹನುಮಂತಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಪವಾಡಿ ಮಂಜಪ್ಪ, ಬಿ.ಎನ್. ಚಂದ್ರಪ್ಪ, ರೇಖಾ, ರೇಣುಕಮ್ಮ ಹಾಗೂ ಸಮುದಾಯದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.