ದಾವಣಗೆರೆ: ‘ಸಂಸದ ಜಿ.ಎಂ. ಸಿದ್ದೇಶ್ವರ ಅವರ ವಿರುದ್ಧ ಜೀವ ಬೆದರಿಕೆ ಒಡ್ಡಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಗಾಂಧಿನಗರ ಠಾಣೆಗೆ ದೂರು ನೀಡಿದ್ದಾರೆ.
‘ಜಿ.ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಸಂಸದರಾಗಿದ್ದು, ಅವರ ಹಾಗೂ ಕುಟುಂಬದವರ ವಿರುದ್ಧ ಸ್ವಾಮಿ ಹಾಗೂ ಅನುಪಮಾ ಎಂಬುವರು ನಾವು ಕೇಳಿದಷ್ಟು ಹಣ ಕೊಡಿ ಇಲ್ಲದಿದ್ದರೆ ನಿಮ್ಮ ಬಗ್ಗೆ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಸುತ್ತೇವೆ ಎಂದು ಈ ಹಿಂದೆ ಬೇಡಿಕೆ ಇಟ್ಟಿದ್ದರು. ನಾವ್ಯಾಕೆ ಹಣ ಕೊಡಬೇಕು ಎಂದು ನಮ್ಮ ನಾಯಕರು ತಿರಸ್ಕರಿಸಿದ್ದರು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಹಣ ಕೊಡಲು ನಿರಾಕರಿಸಿದ್ದರಿಂದ ಅವರು ಅವರ ಕುಟುಂಬದವರನ್ನು ಕುರಿತು ಅಲ್ಲಲ್ಲಿ ಅವಾಚ್ಯ, ಅಶ್ಲೀಲವಾಗಿ ನಿಂದಿಸುವುದು, ಒಂದು ದಿನ ಸರಿಯಾಗಿ ಮಾಡುತ್ತೇವೆ ಎಂದು ಬೆದರಿಕೆ ಹಾಕುವುದು ಮಾಡುತ್ತಿದ್ದರು. ಹಣ ಪಡೆಯಲು ಸಫಲರಾಗಲಿಲ್ಲ ಎಂದು ಹತಾಶೆಗೊಂಡು ನಮ್ಮ ನಾಯಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
‘ಇದರ ಹಿಂದೆ ರಾಜಕೀಯ ದುರುದ್ದೇಶವಿದ್ದು, ಹಲವರ ಕುಮ್ಮಕ್ಕೂ ಇದೆ. ಆದ್ದರಿಂದ ಸುದ್ದಿ ಪ್ರಸಾರ ಮಾಡಿರುವ ಚಾನಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಆರೋಪ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.