ADVERTISEMENT

ವಚನ ಸಾಹಿತ್ಯ ಸವೆಯಲಾರದ ಅಮೃತ

ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವರಾಜ ದೇವರು ಬಣ್ಣನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2024, 15:50 IST
Last Updated 5 ಜೂನ್ 2024, 15:50 IST
ಮಾಯಕೊಂಡ ಸಮೀಪದ ಓಬಣ್ಣನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ತತ್ವ ಪ್ರಚಾರಕ ಸವದತ್ತಿ ಬಸವಾಶ್ರಮದ ಬಸವರಾಜ ದೇವರು ಮಾತನಾಡಿದರು
ಮಾಯಕೊಂಡ ಸಮೀಪದ ಓಬಣ್ಣನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವ ತತ್ವ ಪ್ರಚಾರಕ ಸವದತ್ತಿ ಬಸವಾಶ್ರಮದ ಬಸವರಾಜ ದೇವರು ಮಾತನಾಡಿದರು    

ಮಾಯಕೊಂಡ: ‘ವಚನ ಸಾಹಿತ್ಯ ಸವೆಯದ ಅಮೃತವಾಗಿದ್ದು, ಇದರ ಅಧ್ಯಯನದಿಂದ ಬದುಕು ಸಮೃದ್ಧವಾಗುತ್ತದೆ’ ಎಂದು ಬಸವ ತತ್ವ ಪ್ರಚಾರಕ ಸವದತ್ತಿ ಬಸವಾಶ್ರಮದ ಬಸವರಾಜ ದೇವರು ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಮತ್ತು ಬಸವ ಕಲಾಲೋಕ ಓಬಣ್ಣನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ /// ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಿಂಗದ ಮೂಲಕ ಸ್ವಾನುಭಾವ, ವಚನದ ಮೂಲಕ ಅನುಭಾವದ ಸಾಹಿತ್ಯ ನೀಡಿದವರು ಬಸವಣ್ಣ. ಹನ್ನೆರಡನೇ ಶತಮಾನದಿಂದ ಇಂದಿಗೂ ಪ್ರಸ್ತುತವಿರುವ ವಚನ ಸಾಹಿತ್ಯ ಸವೆಯಲಾರದ ಅಮೃತ. ಶರಣರು ಕಲ್ಯಾಣ ಕ್ರಾಂತಿಯ ವೇಳೆ ತಮ್ಮ ಮಕ್ಕಳನ್ನು ಕೈಬಿಟ್ಟು, ವಚನ ಸಾಹಿತ್ಯ ಪುಸ್ತಕ ಹೊತ್ತೊಯ್ದು ರಕ್ಷಿದರು. ವಚನ ಸಾಹಿತ್ಯ ಸುಮಾರು 780 ವರ್ಷ ಅಜ್ಞಾತವಾಸ ಅನುಭವಿಸಿತು. ಫ.ಗು. ಹಳಕಟ್ಟಿ ಅವರ ಶ್ರಮದಿಂದ ವಚನ ಸಾಹಿತ್ಯ ಪುನರುತ್ಥಾನವಾಯಿತು. ಪ್ರಶ್ನಿಸುವವರಿಗಾಗಿಯೇ ಹುಟ್ಟಿದ ಏಕೈಕ ವೇದಿಕೆ ಅನುಭವ ಮಂಟಪ’ ಎಂದು ಹೇಳಿದರು.

ADVERTISEMENT

‘ಸಂಸ್ಕೃತ ಸಾಹಿತ್ಯಕ್ಕೆ ಹೋಲಿಸಿದರೆ ವಚನ ಸಾಹಿತ್ಯ ಸುಲಿದ‌ ಬಾಳೆ ಹಣ್ಣಿನಂತೆ ಸುಲಭವಾದದ್ದು. ಶರಣ ಸಾಹಿತ್ಯ ಜೀವನಾನುಭವ, ಬದುಕಿನ ಸಾರ್ಥಕತೆಯ ಸಾರಹೊಂದಿದೆ. ಸುವ್ಯವಸ್ಥಿತ ಸಮಾಜ ನಿರ್ಮಾಣಕ್ಕಾಗಿ ಲಿಂಗಾಯತರಲ್ಲಿ ಉಪ ಪಂಗಡಗಳು ಹುಟ್ಟಿವೆಯೇ ಹೊರತು ಬೇರಾವ ಉದ್ದೇಶದಿಂದಲ್ಲ. ಉಪ ಪಂಗಡಗಳ ಮಧ್ಯೆ ಭೇದ ಸಲ್ಲದು’ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನಾನಾಯ್ಕನಹಳ್ಳಿ ಮುರುಗೇಶಪ್ಪ, ‘ಬಸವಣ್ಣ ಅವರದು ಕಲ್ಮಷವಿಲ್ಲದ ಜೀವನ. ಬಸವಾದಿ ಶರಣರು ವಚನ ಸಾಹಿತ್ಯ ಬರೆಯದಿದ್ದರೆ, ನಾವೆಲ್ಲ ಫಲವಿಲ್ಲದ ಮರವಾಗುತ್ತಿದ್ದೆವು. ಶರಣರು ನುಡಿದಂತೆ ನಡೆದು ಸಾಧನೆ ಮಾಡಿದವರು. ಬಸವಣ್ಣನ ಆದರ್ಶ ಪಾಲಿಸಿದರೆ‌ ಎಂದೂ ಕೇಡಾಗುವುದಿಲ್ಲ.‌ ಎಲ್ಲ ಶರಣರ ಬದುಕನ್ನು ನಾವು ಅರಿಯಬೇಕು. ಓಬಣ್ಣನಹಳ್ಳಿಯಲ್ಲಿ ಬಸವ ಮಂಟಪ ನಿರ್ಮಿಸಿರುವುದು ಅತ್ಯಂತ ಹೆಮ್ಮೆಯ, ಸಂಭ್ರಮದ ಸಂಗತಿ’ ಎಂದರು.

ಬಸವ ಬಳಗದ ಅಧ್ಯಕ್ಷ ಹುಚ್ಚಪ್ಪ ಮಾಸ್ತರ್ ಮಾತನಾಡಿದರು.  ಬಸವ ಕಲಾಲೋಕದಿಂದ ವಚನ ಗಾಯನ ನಡೆಯಿತು.
ಚಿನ್ನಸಮುದ್ರ ಉಮೇಶ್ ನಾಯ್ಕ ಜಾನಪದ ಗೀತೆ ಹಾಡಿ ರಂಜಿಸಿದರು. ಓಬಣ್ಣನಹಳ್ಳಿ ಪ್ರಕಾಶ್ ನಿರೂಪಿಸಿ, ವಂದಿಸಿದರು.

ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಗೋಪನಾಳ್‌ ರುದ್ರನಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್ವರಪ್ಪ, ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಆವರಗೆರೆ ರುದ್ರಮುನಿ, ರಾಜ್ಯ ಸಮಿತಿ ಸದಸ್ಯ ಮಹಾಂತೇಶ್ ಅಂಗಡಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.