ಚನ್ನಗಿರಿ: ಚಿತ್ರದುರ್ಗ, ಚನ್ನಗಿರಿ, ಜಗಳೂರು, ಭೀಮಸಮುದ್ರ, ಸಿರಿಗೆರೆ, ಮಲ್ಲಾಡಿಹಳ್ಳಿ ಹಾಗೂ ಹೊಳಲ್ಕೆರೆ ಪಟ್ಟಣಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಿರಲು ಶಾಸಕ ಬಸವರಾಜು ವಿ. ಶಿವಗಂಗಾ ಅವರು ಶನಿವಾರ ಸೂಳೆಕೆರೆಯ ಭದ್ರಾ ನಾಲೆಯ ಬಿಡುಗಂಡಿಯ ಗೇಟ್ ತೆರೆದು ನೀರು ಹರಿಸಿದರು.
ಶಿವಮೊಗ್ಗದಲ್ಲಿ ಈಚೆಗೆ ನಡೆದ ನೀರಾವರಿ ಇಲಾಖೆ ಸಲಹಾ ಸಮಿತಿ ಸಭೆಯಲ್ಲಿ ಸೂಳೆಕೆರೆ ಬಳಿ ಇರುವ ಭದ್ರಾ ನಾಲೆಯಿಂದ ಕುಡಿಯುವ ಉದ್ದೇಶಕ್ಕೆ ಪ್ರತಿ ದಿನ 50 ಕ್ಯೂಸೆಕ್ ನೀರನ್ನು ಕೆರೆಗೆ ಹರಿಸುವಂತೆ ತೀರ್ಮಾನಿಸಲಾಗಿತ್ತು. ಜ. 15ರಿಂದ ಭದ್ರಾ ನಾಲೆಗೆ ನೀರು ಹರಿಸಿದರೂ ನೀರಾವರಿ ಇಲಾಖೆ ಅಧಿಕಾರಿಗಳು ಸೂಳೆಕೆರೆಗೆ ನಾಲೆ ನೀರು ಹರಿಸುವುದನ್ನು ಮರೆತಿದ್ದರು. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ ಭದ್ರಾ ನಾಲೆಯ ಬಿಡುಗಂಡಿಯನ್ನು ತೆರೆದು ಕೆರೆಗೆ ನೀರು ಹರಿಸಲಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ನೀರಾವರಿ ಇಲಾಖೆ ಎಇಇ ವಿಜಯ್ ಸಿ. ತೇತಾಂಬಿ, ಕುಡಿಯುವ ನೀರು ಇಲಾಖೆ ಎಇಇ ಲೋಹಿತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.