ಚನ್ನಗಿರಿ: ಉನ್ನತ ಶಿಕ್ಷಣ ಬದುಕನ್ನು ರೂಪಿಸುವ ದಾರಿಯಾಗಿದ್ದು, ಸ್ಪಷ್ಟ ಗುರಿ ಮತ್ತು ಪರಿಶ್ರಮದಿಂದ ಯಶಸ್ಸು ಸಾಧಿಸಬಹುದು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಪಟ್ಟಣದ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಸಾಂಸ್ಕೃತಿಕ, ಕ್ರೀಡಾ, ಎನ್ಎಸ್ಎಸ್ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮೊಬೈಲ್ ಬಳಕೆ ಸೀಮಿತಗೊಳಿಸಬೇಕು. ಸಮಯ ವ್ಯರ್ಥ ಮಾಡದೇ ಪರಿಶ್ರಮದಿಂದ ಶಿಕ್ಷಣ ಪಡೆಯಬೇಕು’ ಎಂದರು.
‘ತಂದೆ ತಾಯಿ ಹಾಗೂ ಗುರುಗಳ ಆಶೀರ್ವಾದದಿಂದಾಗಿ ಈ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಯುವ ಸಮೂಹ ನನ್ನ ಮೇಲೆ ಭರವಸೆಯಿಟ್ಟು ಮತ ಹಾಕಿ ಗೆಲ್ಲಿಸಿದೆ. ನಿಮ್ಮ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ’ ಎಂದರು.
ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಮಾತನಾಡಿ, ‘ಯುವ ಜನಾಂಗದ ಸಮಸ್ಯೆಗಳನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಯುವಜನತೆಗೆ ಉತ್ತಮ ಅವಕಾಶವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದ್ದು, ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ’ ಎಂದರು.
ಚಿತ್ರನಟ ಪೃಥ್ವಿ ಶಾಮನೂರು, ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಸಂಚಾಲಕ ಎನ್.ಸಿ. ವಿಜಯ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ವೈ. ರವಿಕುಮಾರ್, ಲಿಯಾಕತ್ ಆಲಿ, ಜ್ಯೋತಿ ಕೋರಿ, ಸಿ. ರಮೇಶ್, ಸುರೇಶ್, ಜಿ. ನಿಂಗಪ್ಪ, ಉಪನ್ಯಾಸಕರಾದ ಕೆ.ಎಚ್. ಷಣ್ಮುಖಪ್ಪ, ಕೆ. ಸತೀಶ್ ಕುಮಾರ್, ಡಾ. ಶಕುಂತಲ ಉಪಸ್ಥಿತರಿದ್ದರು. ಪ್ರಾಂಶುಪಾಲ ಬಿ.ಜಿ. ಅಮೃತೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.