ಜಗಳೂರು: ಪಟ್ಟಣದ ಮಧ್ಯ ಭಾಗದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮುರು ಹೆದ್ದಾರಿಯನ್ನು ವಿಸ್ತರಣೆ ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು ಬುಧವಾರ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.
‘ತಾಲ್ಲೂಕು ಕೇಂದ್ರವಾಗಿರುವ ಜಗಳೂರು ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹಲವು ದಶಕಗಳಿಂದ ರಸ್ತೆ ವಿಸ್ತರಣೆ ಮಾಡದ ಕಾರಣ ಚಳ್ಳಕೆರೆ ಟೋಲ್ ಗೇಟ್ನಿಂದ ದಾವಣಗೆರೆ ರಸ್ತೆಯ ನ್ಯಾಯಾಲಯದವರೆಗೂ ಕಿರಿದಾದ ರಸ್ತೆಯಲ್ಲಿ ಸರಕು ಹೊತ್ತ ಬೃಹತ್ ವಾಹನಗಳು, ಬಸ್, ದ್ವಿಚಕ್ರ ವಾಹನಗಳು ಹಾಗೂ ಪಾದಚಾರಿಗಳು ಸಂಚರಿಸಬೇಕಾದ ಅನಿವಾರ್ಯತೆ ಇದೆ. ವಾಹನ ದಟ್ಟಣೆಯಿಂದ ಪ್ರತಿನಿತ್ಯ ಚಿಕ್ಕಪುಟ್ಟ ಅಪಘಾತಗಳು ಸಂಭವಿಸುತ್ತಿರುತ್ತವೆ. ಜನರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಮರೇನಹಳ್ಳಿ ಬಸವರಾಜ್ ತಿಳಿಸಿದರು.
ಪಟ್ಟಣ ಮತ್ತು ತಾಲ್ಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ರಸ್ತೆ ವಿಸ್ತರಣೆ ಮಾಡುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ಬೆಳೆಸಬೇಕು ಎಂದು ವಕೀಲ ಡಿ.ಶ್ರೀನಿವಾಸ್ ಒತ್ತಾಯಿಸಿದರು.
ವಕೀಲರ ಸಂಘದ ಮನವಿ ಸ್ವೀಕರಿಸಿದ ಶಾಸಕ ಬಿ.ದೇವೇಂದ್ರಪ್ಪ, ‘ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಕಾಮಗಾರಿಗೆ ಸರ್ಕಾರದಿಂದ ₹ 20 ಕೋಟಿ ಅನುದಾನ ಮಂಜೂರಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವ ಮಾತಿಲ್ಲ. ವರ್ತಕರ ಸಭೆ ಕರೆದು ನಂತರ ಕಾಮಗಾರಿಗೆ ಚಾಲನೆ ನೀಡಲಾಗುವುದು. ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸಂಘ ಸಂಸ್ಥೆಯವರ ಸಹಕಾರ ಅಗತ್’ ಎಂದರು.
ವಕೀಲ ಸಂಘದ ಕಾರ್ಯದರ್ಶಿ ಎ.ಕೆ. ಪರಶುರಾಮ್, ವಕೀಲರಾದ ಎಚ್.ಬಸವರಾಜಪ್ಪ, ಇ.ಓಂಕಾರಪ್ಪ, ಎಸ್.ಐ. ಕುಂಬಾರ್, ಸಣ್ಣೋಬಯ್ಯ, ಎನ್.ಜೆ. ತಿಪ್ಪೇಸ್ವಾಮಿ, ದೊಡ್ಡಬೋರಯ್ಯ, ಬುಳ್ಳಳ್ಳಿ ನಾಗಪ್ಪ, ಭೂಪತಿ, ತಿಪ್ಪೇಸ್ವಾಮಿ, ನಾಗೇಶ್, ಅಂಜಿನಪ್ಪ, ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.