ದಾವಣಗೆರೆ: ‘ನನ್ನ ಜೊತೆ ಗುರುತಿಸಿಕೊಂಡವರನ್ನು ಕಾಂಗ್ರೆಸ್ಗೆ ಸೇರಿಸಿಕೊಳ್ಳಲಾಗುತ್ತಿದೆ. ನನ್ನ ಜೊತೆ ಫೋಟೊ ತೆಗೆಸಿಕೊಂಡವರನ್ನು ಬೇಟೆಯಾಡಲಾಗುತ್ತಿದೆ. ಇಂದು ನನ್ನ ಜೊತೆ, ನಾಳೆ ಮತ್ತೊಬ್ಬರ ಜೊತೆ ಹೋಗುವವರಿಗೆ ಸ್ವಾಭಿಮಾನ ಇಲ್ಲ. ನನ್ನ ಸ್ವಾಭಿಮಾನದ ಹೋರಾಟ ಮುಂದುವರಿಯುತ್ತದೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ಬಾಷಾ ನಗರದಲ್ಲಿ ಮುಸ್ಲಿಮರು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ನಮ್ಮವರೇ ನಮ್ಮನ್ನು ಬೆಳೆಯಲು ಬಿಡುತ್ತಿಲ್ಲ. ಕಾಲೆಳೆಯುವ ಕೆಲಸ ಮಾಡುತ್ತಿದ್ದಾರೆ. ಕೆಲವರಿಗೆ ಧೈರ್ಯವಾಗಿ ಮಾತನಾಡಲು ಆಗುತ್ತಿಲ್ಲ. ನನ್ನ ಜೊತೆ ಇದ್ದ ಮುಖಂಡರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ’ ಎಂದು ಹೇಳಿದರು.
ಈ ವೇಳೆ ಆರೀಫ್ ಸೇರಿದಂತೆ ಮುಸ್ಲಿ ಸಮುದಾಯದ ನೂರಾರು ಜನರು ಪಾಲ್ಗೊಂಡಿದ್ದರು.
ಸಿಲಿಂಡರ್ ಚಿಹ್ನೆ:
ಪಕ್ಷೇತರ ಅಭ್ಯರ್ಥಿಯಾಗಿರುವ ಜಿ. ಬಿ. ವಿನಯ್ ಕುಮಾರ್ ಅವರಿಗೆ ಸಿಲಿಂಡರ್ ಗುರುತನ್ನು ಕೇಂದ್ರ ಚುನಾವಣಾ ಆಯೋಗ ನೀಡಿದೆ.
‘ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದರು. ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆಯುತ್ತೇನೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಆದ್ರೆ, ವಾಪಸ್ ಪಡೆದಿಲ್ಲ. ಕಣದಲ್ಲಿ ಉಳಿದಿದ್ದೇನೆ. ದಿನಕಳೆದಂತೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದೆ’ ಎಂದು
ಹೇಳಿದರು.
‘ಸಿಲಿಂಡರ್ ಅನ್ನು ಪ್ರತಿಯೊಬ್ಬ ಮಹಿಳೆಯೂ ಉಪಯೋಗಿಸುತ್ತಾರೆ. ಜನರಿಗೆ ಬೇಕಾಗಿರುವ ಅವಶ್ಯಕವೂ ಹೌದು. ಈ ಚಿಹ್ನೆಗೆ ಮತ ಹಾಕುವ ಮೂಲಕ ಗೆಲ್ಲಿಸಿ ಕೊಡಿ’ ಎಂದು ಮನವಿ ಮಾಡಿದರು.
ಇಂದು ಪೂರ್ವಭಾವಿ ಸಭೆ:
ಸಿಲಿಂಡರ್ ಗುರುತು ಸಿಕ್ಕ ಹಿನ್ನೆಲೆಯಲ್ಲಿ ಮತದಾರರ ಮನವೊಲಿಸುವ ಕುರಿತಂತೆ ಚರ್ಚಿಸಲು ಏಪ್ರಿಲ್ 23ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.