ಬಿದರಹಳ್ಳಿ (ನ್ಯಾಮತಿ): ಗ್ರಾಮದ ಕುಟುಂಬವೊಂದರಲ್ಲಿ ಬಾಲಕಿಯ ವಿವಾಹಕ್ಕೆ ದಿನಾಂಕ ನಿಗದಿಪಡಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ವಿವಿಧ ಇಲಾಖೆಗಳ ಮುಖ್ಯಸ್ಥರು ಸೋಮವಾರ ಗ್ರಾಮಕ್ಕೆ ತೆರಳಿ ಕುಟುಂಬದವರಿಗೆ ಎಚ್ಚರಿಕೆ ನೀಡಿ ಬಾಲ್ಯವಿವಾಹ ತಡೆದಿದ್ದಾರೆ.
ಗ್ರಾಮದ 17 ವರ್ಷದ ಬಾಲಕಿಯ ಮದುವೆಗೆ ಜೂನ್ 28ರಂದು ದಿನಾಂಕ ನಿಗದಿಪಡಸಲಾಗಿತ್ತು. ಮದುವೆಗೆ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಪಡೆದ ಮಕ್ಕಳ ಸಹಯವಾಣಿ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪೋಷಕರಿಗೆ ಕಾನೂನು ಪ್ರಕಾರ ನಡೆದುಕೊಳ್ಳುವಂತೆ ಹಾಗೂ ಮದುವೆಯನ್ನು ನಿಲ್ಲಿಸುವಂತೆ ಮಾರ್ಗದರ್ಶನ ನೀಡಿದರು.
‘ಕಾನೂನು ಮೀರಿ ಮದುವೆಗೆ ಮುಂದಾದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿ, ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಯಿತು’ ಎಂದು ನ್ಯಾಮತಿ ಠಾಣೆ ಸಬ್ಇನ್ಸ್ಪೆಕ್ಟರ್ ಜಯಪ್ಪನಾಯ್ಕ, ಮಕ್ಕಳ ಸಹಾಯವಾಣಿ ಕೇಂದ್ರದ ಶಂಕರ ತಿಳಿಸಿದರು.
ಈ ಸಂದರ್ಭದಲ್ಲಿ ಸವಳಂಗ ಠಾಣೆ ಎಎಸ್ಐ ಚಂದ್ರಶೇಖರ, ಬಿದರಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ವರಮಹಾಲಕ್ಷ್ಮಿ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಶಕುಂತಲಾ, ಅಂಗನವಾಡಿ ಕಾರ್ಯಕರ್ತೆ ಗೀತಾ, ಆಶಾ ಕಾರ್ಯಕರ್ತೆ ರೇವತಿ, ಆರೋಗ್ಯ ಇಲಾಖೆಯ ಮೋಹನ ಮತ್ತು ಲಕ್ಷ್ಮಿಬಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.