ADVERTISEMENT

ದಾವಣಗೆರೆ: ಇಂದು ಡಾ.ಪ್ರಭಾ ಪರ ಪ್ರಿಯಾಂಕಾ ಗಾಂಧಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 4 ಮೇ 2024, 5:36 IST
Last Updated 4 ಮೇ 2024, 5:36 IST
<div class="paragraphs"><p>ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಮುಖಂಡರಾದ ಡಿ.ಬಸವರಾಜ್, ಆಸಗೋಡು ಜಯಸಿಂಹ, ದಿನೇಶ್ ಶೆಟ್ಟಿ ಹಾಗೂ ಇತರರು ಪರಿಶೀಲಿಸಿದರು –</p></div>

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ಆಗಮಿಸುವ ಹಿನ್ನೆಲೆಯಲ್ಲಿ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್, ಮುಖಂಡರಾದ ಡಿ.ಬಸವರಾಜ್, ಆಸಗೋಡು ಜಯಸಿಂಹ, ದಿನೇಶ್ ಶೆಟ್ಟಿ ಹಾಗೂ ಇತರರು ಪರಿಶೀಲಿಸಿದರು –

   

ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದಾವಣಗೆರೆ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೇ 4ರಂದು ದಾವಣಗೆರೆ ಆಗಮಿಸುತ್ತಿದ್ದು, ‘ಪ್ರಜಾಧ್ವನಿ- 2’ ಲೋಕಸಭಾ ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರ ಪ್ರಚಾರ ಮಾಡುವರು.

ADVERTISEMENT

ಸಮಾವೇಶಕ್ಕಾಗಿ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲ್‌ ಹಾಕಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ಕಾರ್ಯಕ್ರಮಕ್ಕೆ ಆರಂಭವಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಭಾಗವಹಿಸುವರು.

ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ, ದೇವೆಂದ್ರಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಕೆ.ಸಿ. ಕೊಂಡಯ್ಯ, ಮಾಜಿ ಶಾಸಕ ಎಸ್‌.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಅರಸೀಕೆರೆ ಕೊಟ್ರೇಶ್, ಪಿ.ಟಿ. ಪರಮೇಶ್ವರ ನಾಯ್ಕ ಭಾಗವಹಿಸಲಿದ್ದು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು ಸೇರಿ 60 ಮುಖಂಡರು ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿ, ‘ಸಮಾವೇಶಕ್ಕೆ 50 ಸಾವಿರ ಕುರ್ಚಿಗಳನ್ನು ಹಾಕಲಾಗಿದ್ದು, ಅಂದಾಜು 1ಲಕ್ಷ ಜನರು ಭಾಗವಹಿಸುವರು. ಕಾಂಗ್ರೆಸ್ ಪ್ರಣಾಳಿಕೆ, ಐದು ಗ್ಯಾರಂಟಿಗಳು ಹಾಗೂ ಬಿಜಪಿ ವೈಫಲ್ಯಗಳ ಬಗ್ಗೆ ಸಮಾವೇಶದಲ್ಲಿ ನಾಯಕರು ಮಾತನಾಡುವರು. ಕಾರ್ಯಕ್ರಮ ವೀಕ್ಷಣೆಗೆ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿಯೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದ್ದು, ಮಹಿಳಾ ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲಿ ಪ್ರಿಯಾಂಕ ಗಾಂಧಿ ಪ್ರಚಾರ ನಡೆಸುತ್ತಿರುವುದು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಇನ್ನೂ ಹೆಚ್ಚಿನ ಉತ್ಸಾಹ ನೀಡಲಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ‘ಶಕ್ತಿ’, ‘ಗೃಹಲಕ್ಷ್ಮಿ’ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿರುವುದರಿಂದ ಮಹಿಳೆಯರಿಂದ ಕಾಂಗ್ರೆಸ್‌ನ ಹೆಚ್ಚಿನ ಮತಗಳು ಬರಬಹುದು ಎಂಬುದು ಕಾಂಗ್ರೆಸ್‌ ನಿರೀಕ್ಷೆ. ಪ್ರಿಯಾಂಕ ಗಾಂಧಿ ಮಹಿಳಾ ಮತದಾರರಿಗೆ ಆಕರ್ಷಣೆಯಾಗಲಿದ್ದಾರೆ ಎಂಬುದು ವಿಶ್ಲೇಷಕರ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್ ಮುಖಂಡರಾದ ಅಸಗೋಡು ಜಯಸಿಂಹ, ಡಿ.ಬಸವರಾಜ್, ದಿನೇಶ್ ಕೆ.ಶೆಟ್ಟಿ, ಅಯೂಬ್‌ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಡೋಲಿ ಚಂದ್ರು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.