ದಾವಣಗೆರೆ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಾಮೆಡಿ ಅವರ ಹತ್ಯೆಯನ್ನು ಖಂಡಿಸಿ ದಾವಣಗೆರೆ ಜಿಲ್ಲಾ ರಜಪೂತ್ ಮಹಾಸಭಾ ಹಾಗೂ ವಿಷ್ಣು ಸಮಾಜದವತಿಯಿಂದ ಶುಕ್ರವಾರ ಪ್ರತಿಭಟನೆ ಹಾಗೂ ಬೈಕ್ ರ್ಯಾಲಿ ನಡೆಯಿತು.
ನಗರದ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡ ಮಹಾಸಭಾದ ಸದಸ್ಯರು ‘ಸುಖ್ದೇವ್ ಸಿಂಗ್ ಅಮರ್ ರಹೇ’ ಎಂದು ಘೋಷಣೆ ಕೂಗಿದರು. ಬಳಿಕ ಪಿ.ಬಿ.ರಸ್ತೆಯ ಮೂಲಕ ಬೈಕ್ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
‘ಮಾನವೀಯ ಅಂತಃಕರಣ-ಸಮರಸ ಬಾಳ್ವೆಯನ್ನು ಪ್ರತಿಪಾದಿಸುತ್ತಾ ಜೀವನ ಸಾಗಿಸುತ್ತಿದ್ದ ಸುಖದೇವ್ ಸಿಂಗ್
ಹತ್ಯೆ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದೆ. ಈ ಕೃತ್ಯದ ಹಿಂದೆ ಕಾಣದ ಕೈಗಳ ಕೈವಾಡವಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮಹಾಸಭಾ ಅಧ್ಯಕ್ಷ ಜೆ.ಈಶ್ವರ್ ಸಿಂಗ್ ಕವಿತಾಳ ಆಗ್ರಹಿಸಿದರು.
‘ಸಮಾಜದ ಮುಖಂಡರಿಗೆ ಜೀವಭಯವಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಮುಂದೆ ಎಂದೂ ಇಂತಹ ಸಮಾಜ ಘಾತುಕ ಕೃತ್ಯ ನಡೆಯದಂತೆ ಸಮಾಜದ ಮುಖಂಡರಿಗೆ ಸಂಬಂಧಪಟ್ಟ ಇಲಾಖೆಗಳು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಮೂಲ್ಸಿಂಗ್ ರಾಥೋಡ್, ಗೌತಮ್ಜೈನ್, ರಾಜು ಭಂಡಾರಿ, ಗಣಪತ್ಸಿಂಗ್, ಓಂಪ್ರಕಾಶ್, ರಾಜು ಪಟೇಲ್, ದಳಪತ್ಸಿಂಗ್, ಅಮರ್ ಸಿಂಗ್ ಭಾಟಿ, ಗೋಪಾಲ್ ಸಿಂಗ್ ಭಾಟಿ, ಗಣಪತ್ ಸಿಂಗ್ ದೇವ್ಡಾ,
ಗೌತಮ್ ಜೈನ್, ರಾಕೇಶ್ ರಾಹುಲ್, ರಾಜು ಜಿ. ಪಾಟೀಲ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.