ಮಲೇಬೆನ್ನೂರು: ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ‘ಪುನರ್ವಸು’ ಮಳೆ ಎಡೆಬಿಡದೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಮೆಕ್ಕೆಜೋಳ ಬಿತ್ತನೆ ಮಾಡಿದ್ದ ರೈತರು ಮುಗಿಲು ನೋಡುತ್ತಿದ್ದರು. ಆಗೊಮ್ಮೆ ಈಗೊಮ್ಮೆ ಸುರಿದು ಕಣ್ಣಾಮುಚ್ಚಾಲೆ ಆಡಿ ನೆಮ್ಮದಿ ಕೆಡಿಸಿತ್ತು. ಮಳೆ ಬಂದ ಸ್ವಲ್ಪ ಹೊತ್ತಿನಲ್ಲಿ ಬಿಸಿಲು, ಗಾಳಿ ಹೆಚ್ಚು ಬೀಸಿ ಭೂಮಿ ಒಣಗಿ ಹೋಗುತ್ತಿತ್ತು. ಶುಕ್ರವಾರ ಮಳೆ ಹಿಡಿದಿದ್ದರಿಂದ ಮಳೆಗಾಲದ ವಾತಾವರಣ ನಿರ್ಮಾಣವಾಗಿತ್ತು.
ವಾರದಿಂದ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಬರುತ್ತಿದ್ದು, ತೋಟದ ಬೆಳೆಗಾರರಿಗೆ ನೆಮ್ಮದಿ ನೀಡಿದೆ ಎಂದು ಮೆಕ್ಕೆಜೋಳ ಬೆಳೆಗಾರ ಕೊಪ್ಪದ ಬೀರಪ್ಪ ತಿಳಿಸಿದರು.
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು, ಅಣೆಕಟ್ಟೆಗೆ ಹೆಚ್ಚು ನೀರು ಹರಿದು ಬರುತ್ತಿದೆ ಎಂಬ ಸಂದೇಶವನ್ನು ವಾಟ್ಸ್ಆ್ಯಪ್ಗಳಲ್ಲಿ ನೋಡಿ ಭತ್ತದ ಬೆಳೆಗಾರರು ಹರ್ಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.