ದಾವಣಗೆರೆ: ನಗರದ ಹರ್ಷ ಟೂರಿಸ್ಟ್ ಸಂಸ್ಥೆಯಿಂದ ಸೇವಾ ನ್ಯೂನ್ಯತೆಯಾಗಿದ್ದು, ಒಟ್ಟು ₹ 24,500 ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ ಹಾಗೂ ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಬಿ.ಯು.ಗೀತಾ ಅವರು ಆದೇಶಿಸಿದ್ದಾರೆ.
ನಗರದ ನಿವಾಸಿ ಸತೀಶ್ ಕುಮಾರ್ ಎಂಬುವರು ಹರ್ಷ ಟೂರಿಸ್ಟ್ ಸಂಸ್ಥೆಯ ಮೂಲಕ 2023ರ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನದ ಜೊತೆಗೆ ತ್ರಯಂಬಕೇಶ್ವರ ಮತ್ತು ಶನಿ ಶಿಂಗಾಪುರಕ್ಕೆ ಪ್ರವಾಸ ಕೈಗೊಂಡಿದ್ದರು.
ಟೂರಿಸ್ಟ್ ಸಂಸ್ಥೆಯವರು ನೀಡಿದ ಭರವಸೆಯಂತೆ ಯಾವುದೇ ಆರಾಮದಾಯಕ ಪ್ರವಾಸದ ಸೇವೆಯನ್ನು ನೀಡದೇ ಸೇವಾನ್ಯೂನ್ಯತೆಯನ್ನು ಎಸಗಿದ್ದಾರೆ ಎಂದು ಸತೀಶ್ ಕುಮಾರ್ ಅವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ‘ಅತ್ಯಂತ ಕಳಪೆ ಮಟ್ಟದ ಸೇವೆಯನ್ನು ನೀಡಿದ್ದು, ಪ್ರವಾಸದ ಅವಧಿಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಉಂಟು ಮಾಡಲಾಗಿದೆ’ ಎಂದು ದೂರಿದ್ದರು.
ಪ್ರಕರಣವನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕರ ಆಯೋಗವು ಎದುರುದಾರ ಸಂಸ್ಥೆಯವರು ದೂರುದಾರರಿಂದ ಪಡೆದುಕೊಂಡ ₹ 18,900 ಮೊತ್ತದಲ್ಲಿ ಅರ್ಧ ಹಣವನ್ನು ಮರು ಸಂದಾಯ ಮಾಡಬೇಕೆಂದು ಆದೇಶಿಸಿದೆ. ಜೊತೆಗೆ ಪ್ರಕರಣದ ಖರ್ಚಿನ ಮರು ಸಂದಾಯಕ್ಕೆ ₹ 5,000 ಹಣವನ್ನು ಆದೇಶವಾದ 30 ದಿನಗಳ ಒಳಗಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.