ಮಲೇಬೆನ್ನೂರು: ಪ್ರಸಕ್ತ ವರ್ಷವೂ ಮುಂಗಾರು ಕಣ್ಣಾಮುಚ್ಚಾಲೆ ಆಡುತ್ತಿರುವ ಕಾರಣ ಭಕ್ತರು ಹೊರಗಿನಮ್ಮ ಏಕನಾಥೇಶ್ವರಿ, ಕೋಡಿಮಾರೇಶ್ವರಿ ದೇವಿಗೆ ಮಂಗಳವಾರ ವಿಶೇಷ ಪೂಜೆ ನೆರವೇರಿಸಿದರು.
ಪಟ್ಟಣದ ಅಧಿದೇವತೆ ಮೂಲ ವಿಗ್ರಹಕ್ಕೆ ದುರ್ಗಾಸೂಕ್ತದೊಂದಿಗೆ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ ಮಾಡಿ ಅರ್ಚಿಸಿ ಸಾಮೂಹಿಕ ಪ್ರಾರ್ಥನೆ ಮಾಡಿದರು.
ಮಹಿಳೆಯರು ಹರಿದ್ರಾ ಕುಂಕುಮ ಚೂರ್ಣದೊಂದಿಗೆ ಪಡ್ಲಿಗೆ, ಉಡಿ ತುಂಬಿ ಭಕ್ತಿ ಸಮರ್ಪಿಸಿದರು. ‘ಉಧೋ ಉಧೋ...’ ಉದ್ಘೋಷ ಮುಗಿಲು ಮುಟ್ಟಿತ್ತು. ಪೂಜಾವಿಧಿಗಳನ್ನು ಪ್ರಕಾಶಾಚಾರ್ ನೆರವೇರಿಸಿದರು.
ಪಟ್ಟಣದ ವಿವಿಧ ಸಮುದಾಯದ ಮುಖಂಡರು ಉಪಸ್ಥಿತರಿದ್ದರು. ದೇವಾಲಯವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಪ್ರಸಾದ ವಿತರಿಸಲಾಯಿತು.
ಕರಿಗಲ್ಲು ಪೂಜೆ: ಸಮೀಪದ ಹಿರೇಹಾಲಿವಾಣ ಗ್ರಾಮದಲ್ಲಿ ಮಂಗಳವಾರ ಗ್ರಾಮಸ್ಥರು ಮಳೆಗಾಗಿ ಕರಿಗಲ್ಲಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.