ADVERTISEMENT

ರೈಲಿನಲ್ಲಿ ಮಹಿಳೆಗೆ ಇರಿದಿದ್ದ ಚಾಕು ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಮೇ 2024, 7:11 IST
Last Updated 30 ಮೇ 2024, 7:11 IST

ದಾವಣಗೆರೆ/ಹುಬ್ಬಳ್ಳಿ: ಯುವತಿ ಅಂಜಲಿ ಅಂಬಿಗೇರ ಕೊಲೆ ಆರೋಪಿ ಗಿರೀಶ ಸಾವಂತ ರೈಲಿನಲ್ಲಿ ಮಹಿಳೆಗೆ ಇರಿಯಲು ಬಳಸಿದ್ದ ಚಾಕು ಪತ್ತೆಯಾಗಿದೆ.

‘ಸಿಐಡಿ ಪೊಲೀಸ್ ತಂಡವು ಸ್ಥಳ ಮಹಜರಿಗಾಗಿ ಆರೋಪಿ ಜೊತೆಗೆ ಮಂಗಳವಾರ ದಾವಣಗೆರೆಯ ಮಾಯಕೊಂಡಕ್ಕೆ ಬಂದಿತ್ತು. ಇಲ್ಲಿಗೆ ಸಮೀಪದ ಬೊಮ್ಮನಹಳ್ಳಿ ಬಳಿ ರೈಲು ಹಳಿಯ ಪಕ್ಕದಲ್ಲಿ ಚಾಕು ಸಿಕ್ಕಿದೆ’ ಎಂದು ಮೂಲಗಳು ತಿಳಿಸಿವೆ.

‘ಆರೋಪಿಯು ರೈಲಿನಲ್ಲಿ ಬರುವಾಗ ಚಿಕ್ಕಜಾಜೂರು-ಮಾಯಕೊಂಡ ಮಧ್ಯೆ ಗದಗ ಜಿಲ್ಲೆಯ ಲಕ್ಷ್ಮಿ ಎಂಬುವರಿಗೆ ಚಾಕುವಿನಿಂದ ಇರಿದು ಬಳಿಕ ಚಲಿಸುವ ರೈಲಿನಿಂದ ಕೆಳಗೆ ಜಿಗಿದಿದ್ದ. ನಂತರ ರೈಲ್ವೆ ಪೊಲೀಸರು, ರೈಲ್ವೆ ಇಲಾಖೆಯ ಕೀ ಮ್ಯಾನ್‌ಗಳ ಜತೆಗೂಡಿ ಹುಡುಕಾಟ ನಡೆಸಿದಾಗ, ಚಾಕು ಪತ್ತೆಯಾಗಿರಲಿಲ್ಲ.

ADVERTISEMENT

‘ಅಂಜಲಿಗೆ ಕೊಲೆ ಮಾಡಿದ ಬಳಿಕ ಆರೋಪಿ ಗಿರೀಶ ಮೈಸೂರಿಗೂ ತೆರಳಿದ್ದ. ಹೀಗಾಗಿ ಸಿಐಡಿ ತಂಡವು ಗುರುವಾರ ಆತನನ್ನು ಮೈಸೂರಿಗೆ ಕರೆದೊಯ್ದು ತನಿಖೆ ನಡೆಸುವ ಸಾಧ್ಯತೆಯಿದೆ. ಮೇ 31ರವರೆಗೆ ಆತನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದು, ಅಂದೇ ನ್ಯಾಯಾಂಗ ವಶಕ್ಕೆ ಒಪ್ಪಿಸುವರು. ಈಗ ಪತ್ತೆಯಾಗಿರುವ ಚಾಕುವಿನಿಂದಲೇ ಅಂಜಲಿಯ ಕೊಲೆಯಾಗಿತ್ತೆ ಎಂಬುದು ಖಚಿತವಾಗಬೇಕಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.