ದಾವಣಗೆರೆ: ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದಲ್ಲಿನ ಎಸ್.ಎಸ್.ಮಲ್ಲಿಕಾರ್ಜುನ್ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ನಡೆದ ‘ನಿರ್ಮಾಣ 4.0’ ಪ್ರಾಜೆಕ್ಟ್ ಪ್ರದರ್ಶನವು ಭವಿಷ್ಯದ ಎಂಜಿನಿಯರ್ಗಳ ಪ್ರತಿಭೆ ಅನಾವರಣಗೊಳಿಸಿತು.
ಹಣ್ಣಿನ ಸಿಪ್ಪೆಗಳಿಂದ ತಿನ್ನಬಹುದಾದ ಸ್ಪೂನ್ ತಯಾರಿಕೆ ಸೇರಿದಂತೆ ಕೃಷಿ, ಸಾರಿಗೆ, ಗೃಹ ನಿರ್ಮಾಣ, ವೈದ್ಯಕೀಯ, ನೈಸರ್ಗಿಕ ವಲಯಗಳಲ್ಲಿ ಸುಧಾರಣೆ ತರಬಹುದಾದ ಹತ್ತು ಹಲವು ಯೋಜನೆಗಳನ್ನು ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕೊಮೊಫಿ ಮೆಡ್ಟೆಕ್ನ ಸಹ ಸಂಸ್ಥಾಪಕ ಗುರುರಾಜ್ ಕೆ.ಬಿ., ಬಯೋಕಾನ್ ಬಯಾಲಜಿಕ್ಸ್ ಲಿ. ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಗುಡ್ಡದ್ ಅವರು ಪ್ರದರ್ಶನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳ ಯೋಜನೆಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು.
ಅಂಧ ವ್ಯಕ್ತಿಗಳಿಗೆ ಅವರ ಅರಿವಿನ ಸಾಮರ್ಥ್ಯದ ಆಧಾರದ ಮೇಲೆ ಉದ್ಯೋಗವಕಾಶಗಳನ್ನು ಹೆಚ್ಚಿಸುವ ಬಗ್ಗೆ ವಿದ್ಯಾರ್ಥಿಗಳು ಯೋಜನೆಯೊಂದನ್ನು ರೂಪಿಸಿದ್ದಾರೆ. ಚರಕ- ನೂಲುವ ಯಂತ್ರದ ಮಾರ್ಪಾಡು, ಸೌರ ಫಲಕಗಳಿಂದ ಹೈಬ್ರಿಡ್ ವಿದ್ಯುತ್ ಉತ್ಪಾದನಾ ವ್ಯವಸ್ಥೆ ಬಗ್ಗೆ ರೂಪಿಸಿದ ಯೋಜನೆಗಳು ಗಮನ ಸೆಳೆದವು.
ಸೂಕ್ತವಾದ ಕೀಟನಾಶಕ ಶಿಫಾರಸಿನೊಂದಿಗೆ ಬಾಳೆ ಗಿಡದ ಎಲೆಗಳ ಮೇಲೆ ರೋಗಗಳನ್ನು ಪತ್ತೆಹಚ್ಚಲು ಹೈಬ್ರಿಡ್ ವ್ಯವಸ್ಥೆ, ಇಂಟರ್ನೆಟ್ ಆಫ್ ಥಿಂಗ್ಸ್ ಬಳಸಿ ವೈದ್ಯಕೀಯ ಸಹಾಯಕ ರೋಬೋಟ್, ನಿಯಂತ್ರಿತ ಬೀಚ್ ಕ್ಲೀನರ್ ರೋಬೋಟಿಕ್ ವಾಹನ, ಚರ್ಮದ ಗಾಯದ ಚಿತ್ರಗಳೊಂದಿಗೆ ಕ್ಲಿನಿಕಲ್ ಡೇಟಾವನ್ನು ಸಂಯೋಜಿಸುವ ಉಪಕರಣವನ್ನು ವಿದ್ಯಾರ್ಥಿಗಳು ಅನ್ವೇಷಿಸಿದ್ದಾರೆ.
ಸೌರಶಕ್ತಿಯನ್ನು ಬಳಸಿಕೊಂಡು ಇ-ವಾಹನಕ್ಕಾಗಿ ಚಾರ್ಜಿಂಗ್ ಸ್ಟೇಷನ್, ಕೃಷಿ ಉಪಯುಕ್ತ ವಾಹನ, ಎಲೆಕ್ಟ್ರಿಕಲ್ ಡೇಟಾ ಮಾನಿಟರಿಂಗ್, ಸ್ಮಾರ್ಟ್ ಗ್ರಿಡ್ಗಾಗಿ ವಿತರಣಾ ಪರಿವರ್ತಕ ಮಾನಿಟರಿಂಗ್, ಸ್ಪೀಡ್ ಬ್ರೇಕರ್ ಬಳಸಿಕೊಂಡು ವಿದ್ಯುತ್ ಉತ್ಪಾದನೆ, ಬುದ್ಧಿವಂತ ಸಂಚಾರ ನಿರ್ವಹಣಾ ವ್ಯವಸ್ಥೆ, ಯಂತ್ರ ಕಲಿಕೆ ಆಧಾರಿತ ಬೆಳೆ ಶಿಫಾರಸು ವ್ಯವಸ್ಥೆ, ಬಯೋಮೆಟ್ರಿಕ್ ಆಧಾರಿತ ಪಾವತಿ ವ್ಯವಸ್ಥೆ ಮತ್ತು ಬೌದ್ಧಿಕ ಕಣ್ಗಾವಲು ಭದ್ರತಾ ವ್ಯವಸ್ಥೆ ಬಗ್ಗೆಯೂ ವಿದ್ಯಾರ್ಥಿಗಳು ಯೋಜನೆ ರೂಪಿಸಿದ್ದಾರೆ.
ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಎಚ್.ಬಿ. ಅರವಿಂದ್ ಮಾತನಾಡಿ, ವಿದ್ಯಾರ್ಥಿಗಳು 60ಕ್ಕೂ ಹೆಚ್ಚು ಯೋಜನೆಗಳನ್ನು ಪ್ರದರ್ಶಿಸಿದ್ದು, ಈ ಪೈಕಿ ಕೆಲವು ಯೋಜನೆಗಳಿಗೆ ಪೇಟೆಂಟ್ ತೆಗೆದುಕೊಳ್ಳಲಾಗುವುದು ಎಂದರು. ಸಂಚಾಲಕ ಎ.ಜಿ. ಶಂಕರಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.