ಚನ್ನಗಿರಿ: ತಾಲ್ಲೂಕು ನೀತಿಗೆರೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಬಸವನ ಉತ್ಸವ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನಡೆಯಿತು.
ಸೋಮವಾರ ಬಸವನ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಗಾಸೆಯ ಕಲಾ ತಂಡದ ಮೇಳದೊಂದಿಗೆ ವೀರಭದ್ರೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ತಂದು ಗಾಡಿಯಲ್ಲಿ ಪ್ರತಿಷ್ಠಾಪನೆ ಮಾಡುತ್ತಿದ್ದಂತೆ ಗಾಡಿಯನ್ನು ಮುಂದಕ್ಕೆ ಎಳೆದುಕೊಂಡು ಹೋಗಲು ಆರಂಭಿಸಿದರು. ದೇವರ ಮೂರ್ತಿ ಇರುವ ಗಾಡಿಯ ಮೇಲೆ ನೆರೆದಿದ್ದ ಭಕ್ತರು ಮಂಡಕ್ಕಿ, ಮೆಣಸು ಹಾಗೂ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು.
ನಂತರ ಗುಗ್ಗುಳ ಕಾರ್ಯಕ್ರಮ ನಡೆಯಿತು. ಗುಗ್ಗುಳದ ಗಡಿಗೆಯನ್ನು ನೆರೆದಿದ್ದ ಭಕ್ತರು ತಮ್ಮ ತಲೆಯ ಮೇಲಿರಿಸಿಕೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ಇದಾದ ನಂತರ ಕೆಂಡ ಹಾಯುವ ಕಾರ್ಯಕ್ರಮ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ನಡೆಯಿತು.
ಮಂಗಳವಾರ ವೀರಭದ್ರೇಶ್ವರ ಸ್ವಾಮಿ ದೊಡ್ಡ ರಥೋತ್ಸವ ನಡೆಯಲಿದೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯಾದ ಮರುದಿನ ರಥೋತ್ಸವ ನಡೆಯುತ್ತದೆ. ಜಿಲ್ಲೆಯ ವಿವಿಧ ಭಾಗಗಳಿಂದ 5,000ಕ್ಕೂ ಹೆಚ್ಚು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವಕ್ಕೆ ಬಂದ ಎಲ್ಲ ಭಕ್ತರಿಗೆ ದೇವಸ್ಥಾನ ಸಮಿತಿಯಿಂದ ಪ್ರಸಾದ ವಿನಿಯೋಗ ಕಾರ್ಯ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.