ಕಡರನಾಯ್ಕನಹಳ್ಳಿ: ಎರಡು ವರ್ಷಗಳು ಕಳೆದರೂ ಪೂರ್ಣವಾಗದ ಯಕ್ಕೆಗೊಂದಿ-ನಂದಿಗುಡಿ ರಸ್ತೆ ಕಾಮಗಾರಿ.. ಇಲಾಖಾ ಆದೇಶಕ್ಕೂ ಕಿಮ್ಮತ್ತು ನೀಡದ ಗುತ್ತಿಗೆದಾರ.. ಸವಾರರಿಗೆ ಅಪಘಾತದ ಅಪಾಯ ಮಾತ್ರ ತಪ್ಪಿಲ್ಲ...
ಇದು ಸಮೀಪದ ಎಕ್ಕೆಗೊಂದಿಯಿಂದ ಭಾನುವಳ್ಳಿಯವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿಯ ವ್ಯಥೆ. ರಸ್ತೆಗೆ ₹15 ಕೋಟಿ ಮಂಜೂರಾಗಿದ್ದರೂ ಕಾಮಗಾರಿ ಅಪೂರ್ಣಗೊಂಡಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ರಸ್ತೆ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ರಸ್ತೆ ಬದಿ ಚರಂಡಿ ನಿರ್ಮಾಣ ಪೂರ್ಣಗೊಳಿಸಿಲ್ಲ. ರಸ್ತೆಯ ಒಂದು ಪಥಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಇನ್ನೊಂದು ಪಥಕ್ಕೆ ಕಾಂಕ್ರೀಟ್ ಹಾಕದೆ ಹಾಗೆಯೇ ಬಿಡಲಾಗಿದೆ. ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಎದುರಿಗೆ ಬರುವ ವಾಹನಗಳಿಗೆ ದಾರಿ ಬಿಡುವ ವೇಳೆ, ಸವಾರರು ರಸ್ತೆಯ ಬದಿಗೆ ಬೈಕ್ ಚಲಾಯಿಸಿ ಆಯತಪ್ಪಿ ಬಿದ್ದ ಉದಾಹರಣೆಗಳೂ ಇವೆ. ಈಚೆಗೆ ವಾಸನ ಗ್ರಾಮದ ಯುವಕ ಚಂದ್ರು ಎಂಬುವರು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ನಿದರ್ಶನವಿದೆ.
‘ಎಷ್ಟೋ ಬಾರಿ ಲೋಕೋಪಯೋಗಿ ಇಲಾಖೆಗೆ ಈ ಬಗ್ಗೆ ತಿಳಿಸಿದ್ದೇವೆ. ಗುತ್ತಿಗೆದಾರರ ನಿರ್ಲಕ್ಷವೋ, ಅಧಿಕಾರಿಗಳ ನಿರ್ಲಕ್ಷ್ಯವೋ ತಿಳಿಯದಾಗಿದೆ. ಕಳಪೆ ಮತ್ತು ಅಪೂರ್ಣ ಕಾಮಗಾರಿಯಿಂದ ಅನಾಹುತ ತಪ್ಪಿಲ್ಲ. ಈ ಕೂಡಲೇ ಸರಿಪಡಿಸದಿದ್ದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟಿಸಲಾಗುವುದು’ ಎಂದು ಹರಿಹರ ತಾಲೂಕು ರೈತ ಸಂಘದ ಅಧ್ಯಕ್ಷ ಕೊಟ್ರೇಶ್ ಎಚ್ಚರಿಸಿದ್ದಾರೆ.
ಗುತ್ತಿಗೆದಾರರಿಗೆ ಹಲವು ಬಾರಿ ನೋಟಿಸ್ ನೀಡಿದ್ದೇವೆ. ಕಪ್ಪು ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದ್ದೇವೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದುಶಿವಮೂರ್ತಿ ಲೋಕೋಪಯೋಗಿ ಇಲಾಖೆ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.