ADVERTISEMENT

ಧಾರವಾಡ | ಹೆದ್ದಾರಿಯಲ್ಲಿ ಬ್ಯಾರಿಕೇಡ್‌; ನಿಲ್ಲದ ಕಿರಿಕಿರಿ

ವಾಹನಗಳ ದಾಖಲೆ ಪರಿಶೀಲನೆ ನೆಪ; ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಲ್ಲುವ ವಾಹನಗಳು

ನಾಗರಾಜ್ ಬಿ.ಎನ್‌.
Published 25 ಅಕ್ಟೋಬರ್ 2024, 6:48 IST
Last Updated 25 ಅಕ್ಟೋಬರ್ 2024, 6:48 IST
ಕಲಘಟಗಿ ತಾಲ್ಲೂಕಿನ ಚಳಮಟ್ಟಿಯ ಹೆದ್ದಾರಿ ಮಧ್ಯ ಬ್ಯಾರಿಕೇಡ್‌ ಹಾಕಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಕಲಘಟಗಿ ತಾಲ್ಲೂಕಿನ ಚಳಮಟ್ಟಿಯ ಹೆದ್ದಾರಿ ಮಧ್ಯ ಬ್ಯಾರಿಕೇಡ್‌ ಹಾಕಿ ವಾಹನ ತಪಾಸಣೆ ನಡೆಸುತ್ತಿರುವ ಪೊಲೀಸರು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ದಾಖಲೆಗಳ ಪರಿಶೀಲನೆ ನೆಪದಲ್ಲಿ ಪೊಲೀಸರು ಅನಗತ್ಯವಾಗಿ ವಾಹನ ಸವಾರರನ್ನು ತಡೆದು ತಪಾಸಣೆ ನಡೆಸಬಾರದು. ಸಂಚಾರ ನಿಯಮ ಉಲ್ಲಂಘಿಸಿದ ಸಂದರ್ಭದಲ್ಲಿ ಮಾತ್ರ ತಡೆದು ದಂಡ ವಿಧಿಸಬೇಕು ಎಂದು ಪೊಲೀಸ್‌ ಇಲಾಖೆಯ ಸ್ಪಷ್ಟ ನಿರ್ದೇಶನವಿದ್ದರೂ, ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವ್ಯಾಹತವಾಗಿ ವಾಹನಗಳನ್ನು ತಡೆದು ತಪಾಸಣೆ ನಡೆಸಲಾಗುತ್ತಿದೆ.

ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ನಿಯಮ ಮೀರಿ ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಿರುವುದು ಸವಾರರಿಗೆ ಕಿರಿಕಿಯಾಗುತ್ತಿದೆಯಲ್ಲದೆ, ಅಪಘಾತಗಳಿಗೂ ಕಾರಣವಾಗುತ್ತಿದೆ.

ಹುಬ್ಬಳ್ಳಿ ಕಲಘಟಗಿ ಮಾರ್ಗದ ಚಳಮಟ್ಟಿ, ಬೂದನಗುಡ್ಡ, ಮಿಶ್ರಿಕೋಟೆ ಕ್ರಾಸ್‌, ಹುಬ್ಬಳ್ಳಿಯ ಗಬ್ಬೂರು ಬೈಪಾಸ್‌, ಹುಬ್ಬಳ್ಳಿ–ತಡಸ ಕ್ರಾಸ್‌, ಹುಬ್ಬಳ್ಳಿ–ಕುಸಗಲ್‌ ರಸ್ತೆ, ಹುಬ್ಬಳ್ಳಿ–ಗದಗ ರಸ್ತೆ, ಧಾರವಾಡ–ಬೆಳಗಾವಿ ರಸ್ತೆ, ಧಾರವಾಡ–ಸವದತ್ತಿ ರಸ್ತೆ, ಧಾರವಾಡ–ಹಳಿಯಾಳ ಹಾಗೂ ಧಾರವಾಡ ಕಲಘಟಗಿ ಸೇರಿದಂತೆ ಹುಬ್ಬಳ್ಳಿ–ಧಾರವಾಡ ಮಹಾನಗರದಲ್ಲೂ ಅನಗತ್ಯವಾಗಿ ನಿರಂತರ ವಾಹನ ತಪಾಸಣೆ ನಡೆಯುತ್ತದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎನ್ನುವುದು ಸವಾರರ ಹಾಗೂ ಸಾರ್ವಜನಿಕರ ಆರೋಪವಾಗಿದೆ.

ADVERTISEMENT

ಧಾರವಾಡ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆ ಹಾಗೂ ಕಲಘಟಗಿ ಠಾಣೆ ಪೊಲೀಸರು ಹೆಚ್ಚಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನಗಳ ತಪಾಸಣೆ ನಡೆಸುತ್ತಾರೆ. ತಿಂಗಳ ಕೊನೆಯ ವಾರದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ಪೊಲೀಸರು ಅಲ್ಲಿಯೇ ಮೊಕ್ಕಾಂ ಹೂಡುತ್ತಾರೆ. ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸುವುದು ಸುಗಮ ಸಂಚಾರಕ್ಕೆ ಅಡಚಣೆ ಹಾಗೂ ಅಪಘಾತಕ್ಕೆ ಕಾರಣವಾಗಬಹುದು ಎಂದು ವರ್ಷದ ಹಿಂದೆ ಪೊಲೀಸ್‌ ಮಹಾನಿರ್ದೇಶಕರಾಗಿದ್ದ ಪ್ರವೀಣ್‌ ಸೂದ್‌ ಅವರು ‘ನಡುರಸ್ತೆಯಲ್ಲಿ ಹಾಗೂ ಅನಗತ್ಯವಾಗಿ ವಾಹನ ತಪಾಸಣೆ ನಡೆಸಬಾರದು’ ಎಂದು ಆದೇಶ ಹೊರಡಿಸಿದ್ದರು. ಆದರೆ, ಅದು ಇಲ್ಲಿ ಪಾಲನೆಯಾಗುತ್ತಿಲ್ಲ.

‘ಹುಬ್ಬಳ್ಳಿ ಕಾರವಾರ ರಸ್ತೆಯ ಚಳಮಟ್ಟಿ ಕ್ರಾಸ್‌, ತಡಸ್‌ ಕ್ರಾಸ್‌ನ ಗಾಯತ್ರಿ ತಪೋವನ, ಅಂಚಟಗೇರಿ ಗೋಪಾಳ ಭಾಗದ ಹೆದ್ದಾರಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ಹಾಗೂ ಕಲಘಟಗಿ ಠಾಣೆ ಪೊಲೀಸರು ಬೆಳಿಗ್ಗೆಯಿಂದ ಸಂಜೆವರೆಗೂ ಬ್ಯಾರಿಕೇಡ್‌ ಹಾಕಿ ಕಾರ್ಯಾಚರಣೆ ನಡೆಸುತ್ತಾರೆ. ಹೊರ ರಾಜ್ಯದ ಲಾರಿಗಳು ಹಾಗೂ ಬೇರೆ ಜಿಲ್ಲೆಗಳ ಪಾಸಿಂಗ್‌ ಇರುವ ವಾಹನಗಳನ್ನು ರಸ್ತೆ ಮಧ್ಯೆಯೇ ತಡೆದು ನಿಲ್ಲಿಸುತ್ತಾರೆ. ಆ ಸಂದರ್ಭದ ಹೆದ್ದಾರಿಯ ಎರಡೂ ಕಡೆ, ಲಾರಿ, ಬಸ್‌, ಟ್ಯಾಂಕರ್‌ಗಳು ಸಾಲಾಗಿ ನಿಂತು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ’ ಎಂದು ಚಳಮಟ್ಟಿಯ ಗ್ರಾಮಸ್ಥ ಈರಣ್ಣ ದಪ್ಪೇದಾರ ಹೇಳುತ್ತಾರೆ.

ಹೆದ್ದಾರಿಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುವುದರಿಂದ, ಕೆಲವು ದ್ವಿಚಕ್ರ ವಾಹನ ಸವಾರರು ದೂರದಲ್ಲಿ ಪೊಲೀಸರನ್ನು ಕಂಡ ತಕ್ಷಣ ಅಲ್ಲಿಯೇ ಬೈಕ್‌ನ್ನು ತಿರುಗಿಸಲು ಯತ್ನಿಸುತ್ತಾರೆ. ವಿಪರೀತ ವಾಹನಗಳ ಸಂಚಾರ ಇರುವುದರಿಂದ ಅಪಾಯವು ಎದುರಾಗಬಹುದಾದ ಸಾಧ್ಯತೆಯಿದೆ ಎನ್ನುವುದು ಸಾರ್ವಜನಿಕರ ಅಳಲು.

ಸಂಚಾರ ನಿಯಮಗಳೇನು?: ವಾಹನ ತಪಾಸಣೆ ಸಂದರ್ಭ ಸಿಬ್ಬಂದಿ ಬಾಡಿ ವಾರ್ನ್‌ ಕ್ಯಾಮೆರಾ ಕಡ್ಡಾಯವಾಗಿ ಅಳವಡಿಸಿಕೊಂಡಿರಬೇಕು. ಸಂಚಾರ ನಿಯಮ ಉಲ್ಲಂಘಿಸಿದ್ದು ಕಂಡು ಬಂದರೆ ವಾಹನ ತಡೆದು ದಾಖಲೆ ಪರಿಶೀಲನೆ ಮಾಡಬಹುದು. ಕಳವು ಮಾಡಿದ ವಾಹನ ಎಂದು ತಿಳಿದು ಬಂದರೆ ತಡೆದು ವಶಕ್ಕೆ ಪಡೆಯಬಹುದು. ರಾತ್ರಿ ವೇಳೆ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವವರನ್ನು ತಪಾಸಣೆ ಮಾಡಬಹುದು. ಅದು ಸಂಪೂರ್ಣ ವಿಡಿಯೊ ಚಿತ್ರೀಕರಣವಾಗಬೇಕು. ಆದರೆ, ದಾಖಲೆಗಳನ್ನು ಪರಿಶೀಲನೆ ಮಾಡುವ ನೆಪದಲ್ಲಿ ವಾಹನಗಳನ್ನು ತಡೆಯಬಾರದು. ನಡುರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಬಾರದು.

ಕಲಘಟಗಿ ತಾಲ್ಲೂಕಿನ ಚಳಮಟ್ಟಿಯ ಹೆದ್ದಾರಿ ಮಧ್ಯ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನ ತಪಾಸಣೆ ನಡೆಸುತ್ತಿರುವುದರಿಂದ ವಾಹನಗಳ ದಟ್ಟಣೆ ಉಂಟಾಗಿರುವುದು –ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

Quote - ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ತಪಾಸಣೆ ಮಾಡುವಂತಿಲ್ಲ. ಬ್ಯಾರಿಕೇಡ್‌ ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದರೆ ಪರಿಶೀಲನೆ ನಡೆಸಲಾಗುವುದು ಗೋಪಾಲ ಬ್ಯಾಕೋಡ್‌ ಎಸ್ಪಿ ಧಾರವಾಡ

Cut-off box - ‘ಗದರಿಸಿ ದಂಡ ಪಾವತಿಸಿಕೊಳ್ಳುತ್ತಾರೆ’ ‘ಹೆದ್ದಾರಿಯ ಅಕ್ಕಪಕ್ಕ ನೂರಾರು ಹಳ್ಳಿಗಳು ಇದ್ದು ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗಬೇಕೆಂದರೆ ಹೆದ್ದಾರಿಯನ್ನೇ ಆಶ್ರಯಿಸಬೇಕಿದೆ. ಹೆಲ್ಮೆಟ್‌ ಧರಿಸಿ ವಾಹನಗಳ ಕಾಗದ ಪತ್ರಗಳನ್ನು ಇಟ್ಟುಕೊಂಡಿರುತ್ತೇವೆ. ಆದರೂ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ಮಾಡುತ್ತಾರೆ. ಸಂಚಾರ ನಿಯಮ ಉಲ್ಲಂಘಿಸಿರುವುದು ಕಂಡು ಬಂದರೆ ಮಾತ್ರ ವಾಹನ ತಪಾಸಣೆ ಮಾಡಬೇಕೆನ್ನುವ ನಿಯಮವಿದೆ. ಪೊಲೀಸರಿಗೆ ಆ ಕುರಿತು ಪ್ರಶ್ನಿಸಿದರೆ ಅತಿವೇಗದಿಂದ ಬೈಕ್‌ ಚಲಾಯಿಸಿದ್ದೀರಿ ಎಂದು ಗದರಿಸಿ ದಂಡ ಪಾವತಿಸಲು ಹೇಳುತ್ತಾರೆ’ ಎಂದು ಅಂಚಟಗೇರಿ ರೈತ ರಾಮನಗೌಡಪ್ಪ ಸಿಕಂದರ ಆರೋಪಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.