ನವಲಗುಂದ: ‘ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನುಷ್ಯನ ಹೊರ ಜಗತ್ತಿನ ಒತ್ತಡಗಳನ್ನು ಮರೆತು ಮಾನಸಿಕ ಒತ್ತಡವನ್ನು ಹತೋಟಿಗೆ ತರಬಹುದಾಗಿದೆ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ನಡೆದರೆ ಬಾಳಿನಲ್ಲಿ ಶಾಂತಿ ನೆಮ್ಮದಿ ಕಾಣಬಹುದು. ಆದ್ದರಿಂದ ಪ್ರತಿಯೊಬ್ಬರೂ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ’ ಎಂದು ಮುರಗೋಡದ ಶ್ರೀ ಮಹಾಂತ ದುರದುಂಡೇಶ್ವರ ಸಂಸ್ಥಾನ ಮಠದ, ಶ್ರೀ ಪ್ರಣವಸ್ವರೂಪಿ ನೀಲಕಂಠ ಸ್ವಾಮೀಜಿ ನುಡಿದರು.
ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ, ಶ್ರೀ ಮಹಾಂತ ದುರದುಂಡೇಶ್ವರ ದೇವಸ್ಥಾನದ ಗದ್ದುಗೆ ಪ್ರತಿಷ್ಠಾಪನೆ ಮತ್ತು ನೂತನ ಕಳಸಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ವಿಜ್ಞಾನ ಎಷ್ಟೇ ಮುಂದುವರೆದರೂ ಅನ್ನದಾತನನ್ನು ಹಿಂದಿಕ್ಕಲು ಸಾಧ್ಯವೇ ಇಲ್ಲ. ಎಲ್ಲರೂ ಜೀವನದಲ್ಲಿ ಹೆತ್ತವರು ಮತ್ತು ಗುರು-ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು. ಗ್ರಾಮದಲ್ಲಿ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ಆಯೋಜನೆಗೊಳ್ಳಲಿ’ ಎಂದು ಆಶೀರ್ವಚನ ನೀಡಿದರು.
ಶ್ರೀಗಳ ಸಾನಿಧ್ಯದಲ್ಲಿ ಪೂಜಾ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನ ಸಂಗ್ಗೊಳ್ಳಿಯ ಹಿರೇಮಠದ ಉದಯಶಾಸ್ತ್ರಿಯವರು ನೆರವೇರಿಸಿದರು.
ಶಾಸಕ ಎನ್.ಎಚ್.ಕೋನರಡ್ಡಿ ಹಾಗೂ ವಿವಿಧ ಗಣ್ಯರು ನೂತನ ದೇವಸ್ಥಾನದ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಶ್ರೀಗಳು ಶಾಸಕರನ್ನು ಸನ್ಮಾನಿಸಿದರು.
ಗ್ರಾಮದ ಹಿರಿಯರಾದ ಮಂಜು ಬಾಳಿ, ಗಂಗಪ್ಪ ಯಾದವಾಡ, ಶಿವನಗೌಡ ರಾಯನಗೌಡ್ರ, ಮಹಾಂತೇಶ್ ಬಾಳಿ, ಮಲ್ಲಪ್ಪ ಯಾದವಾಡ, ಮಡಿವಾಳಪ್ಪ ಬಾಳಿ, ಬಸುರಾಜ ಬಾಳಿ, ಮುತ್ತು ಸಣಮನಿ, ಮಲಕಾಜಗೌಡ ಪವಾಡಿಗೌಡ್ರ, ಬಾಳಪ್ಪ ಮಡಿವಾಳರ, ಶಂಕರಗೌಡ ಗುತ್ತಿನಗೌಡ್ರ, ಬಸನಗೌಡ ಕರಡಿಗುಡ್ಡ ಸೇರಿದಂತೆ ಶಿರೂರು ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು, ಯುವಕರು ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.