ADVERTISEMENT

ಬೀಜ, ಗೊಬ್ಬರ– ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

ಮಾರಾಟಗಾರರಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:47 IST
Last Updated 26 ಮೇ 2024, 15:47 IST
ಹುಬ್ಬಳ್ಳಿಯ ರೈತ ಸಂಪರ್ಕದಲ್ಲಿ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ದಾಸ್ತಾನು ಫಲಕ ಪರಿಶೀಲಿಸಿದರು
ಹುಬ್ಬಳ್ಳಿಯ ರೈತ ಸಂಪರ್ಕದಲ್ಲಿ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ ದಾಸ್ತಾನು ಫಲಕ ಪರಿಶೀಲಿಸಿದರು   

ಧಾರವಾಡ: ಬಿತ್ತನೆ ಬೀಜ, ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತಹ ಮಾರಾಟಗಾರರ ಲೈಸೆನ್ಸ್ ರದ್ದುಪಡಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಬಿತ್ತನೆ ಬೀಜ ಖರೀದಿಗೆ ಬರುವ ರೈತರಿಗೆ ಕೆಲವು ಕೃಷಿ ಪರಿಕರ ಮಾರಾಟಗಾರರು, ಸೊಸೈಟಿ ಸಿಬ್ಬಂದಿ ಅನಗತ್ಯ ಷರತ್ತು ವಿಧಿಸುವುದು ಮತ್ತು ಬಿತ್ತನೆ ಬೀಜ, ಗೊಬ್ಬರದ ಕೊರತೆ ಇದೆ ಎಂದು ಬಿಂಬಿಸಿ ಕೃತಕ ಅಭಾವ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದು ಬಂದಿದೆ. ಅಂಥ ಮಾರಾಟಗಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲಾಮಟ್ಟದಲ್ಲಿ ಕೃಷಿ ಜಾಗೃತ ಕೋಶದ ಅಧಿಕಾರಿಗಳು ಮಾರಾಟ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ್ಧಾರೆ. 650ಕ್ಕೂ ಹೆಚ್ಚು ಬಿತ್ತನೆ ಬೀಜದ ಮಾದರಿ ಹಾಗೂ ರಸಗೊಬ್ಬರದ 120 ಮಾದರಿಗಳನ್ನು ಗುಣಮಟ್ಟದ ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪ್ರತಿ ವಿತರಣಾ ಕೇಂದ್ರದಲ್ಲಿ ಬಿತ್ತನೆ ಬೀಜಗಳ ಮೊಳಕೆ ಪ್ರಮಾಣ ಪರೀಕ್ಷಿಸಿ ಗುಣಮಟ್ಟ ಖಾತ್ರಿಪಡಿಸಿಕೊಂಡು ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಜಿಲ್ಲೆಯಲ್ಲಿ 14 ರೈತ ಸಂಪರ್ಕ ಕೇಂದ್ರಗಳ ಜೊತೆಗೆ 17 ಹೆಚ್ಚುವರಿ ಕೇಂದ್ರಗಳನ್ನು ಬೀಜ ವಿತರಣೆಗೆ ತೆರೆಯಲಾಗಿದೆ. ಬೀಜ ಮತ್ತು ರಸಗೊಬ್ಬರ ಸಾಕಷ್ಟು ದಾಸ್ತಾನು ಇದೆ. ರೈತರು ಆತಂಕ ಪಡುವ ಅಗತ್ಯ ಇಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ದಟ್ಟಣೆ ಹೆಚ್ಚು ಇದ್ದರೆ ಹೆಚ್ಚುವರಿ ಕೌಂಟರ್ ತೆರೆಯುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ.

ತಹಶೀಲ್ದಾರ್‌ ಮತ್ತು ಸಹಾಯಕ ಕೃಷಿ ನಿರ್ದೇಶಕರು ನಿಯಮಿತವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಬೀಜ, ಗೊಬ್ಬರ ವಿತರಣೆ ಪರಿಶೀಲಿಸಬೇಕು. ಕೃಷಿ ಪರಿಕರ ಖರೀದಿಸಿದರೆ ಬೀಜ ಅಥವಾ ಗೊಬ್ಬರ ನೀಡುವುದಗಿ ಮಾರಾಟ ಕೇಂದ್ರದವರು ಷರತ್ತು ಹಾಕಿದರೆ ರೈತರು ನೇರವಾಗಿ ಕೃಷಿ ಇಲಾಖೆ ಹಾಗೂ ಜಾಗೃತದಳ ಅಥವಾ ತಹಶಿಲ್ದಾರ್‌ ಕಚೇರಿ ಸಹಾಯವಾಣಿಗೆ ಫೋನ್‌ ಮಾಡಿ ಮಾಹಿತಿ ನೀಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.