ನವಲಗುಂದ: ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಈ ಹಿಂದೆ ಗೋವಾದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹಾದಾಯಿಂದ ಒಂದೇ ಒಂದು ಹನಿ ನೀರನ್ನು ಕೊಡುವುದಿಲ್ಲ ಎಂದು ಹೇಳಿದ್ದರು. ಈಗ ನೀರಾವರಿ ಯೋಜನೆ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ತಾಲ್ಲೂಕಿನ ಮೊರಬ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ, ಈ ಭಾಗದ ಪ್ರಮುಖ ಬೇಡಿಕೆಯಾದ ಮಹದಾಯಿ ವಿಚಾರದಲ್ಲಿ ಕೇಂದ್ರ ಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಬೇಕಾದ ಎಲ್ಲ ಪ್ರಯತ್ನ ಮಾಡಿದ್ದೇನೆ. ರಾಜ್ಯದಿಂದ ಸರಿಯಾಗಿ ದಾಖಲೆ ಸಲ್ಲಿಕೆಯಾಗದ ಕಾರಣ ಕೆಲಸ ಪೆಂಡಿಂಗ್ ಉಳಿದಿದೆ. ಈ ನೆಲದ ಋಣ ತೀರಿಸುವೆ ಎಂದರು.
ಬಿಜೆಪಿಗೆ ನಮ್ಮ ಮತ ನೀಡೋಣ. ಮೂರನೇ ಬಾರಿಗೆ ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸೋಣ ಎಂದರು.
ಶಾಸಕ ಬಸನಗೌಡ ಪಾಟೀಲ್ ಮಾತನಾಡಿ, ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ಹತ್ಯೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಅವರ ಹೇಳಿಕೆ ಅಪರಾಧಿಗಳಿಗೆ ರಕ್ಷಣೆ ನೀಡುವಂತದ್ದಾಗಿದೆ. ಕಾಂಗ್ರೆಸ್ನವರು ಪಾಕಿಸ್ತಾನದಲ್ಲಿ ಇರಲು ಯೋಗ್ಯರು ಎಂದರು.
ದೇಶದ ಶೇ 80ರಷ್ಟು ಹಿಂದುಗಳ ಹಿತಾಸಕ್ತಿಯನ್ನು ಕಾಪಾಡುವ ಪಕ್ಷವೇನಾದರೂ ಇದ್ದರೆ ಅದು ಬಿಜೆಪಿ ಮಾತ್ರ. ದೇಶದ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬುವುದು ನಮ್ಮೆಲ್ಲರ ಸಂಕಲ್ಪ ಎಂದು ಹೇಳಿದರು.
ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಹ್ಲಾದ ಜೋಶಿ ಅವರನ್ನು ಬಹುಮತದಿಂದ ಗೆಲ್ಲಿಸಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಅಡಿಗಪ್ಪ ಮನಮಿ, ಷಣ್ಮುಖ ಗುರಿಕಾರ, ಮುತ್ತಣ್ಣ ಮನಮಿ , ಸುರೇಶ ಗಾಣಿಗೇರ, ಸಿದ್ದನಗೌಡ ಪಾಟೀಲ, ವೀರಯ್ಯ ವಿರಂತಿಮಠ, ಮಂಜುನಾಥ ಕಾರೊಡ ಮಲ್ಲಿಕಾರ್ಜುನ ಹೊರಕೇರಿ, ಸಿದ್ದಣ್ಣ ಕೆಟಗೇರಿ, ಬಸವರಾಜ ಕುಂದಗೋಳಮಠ ಇತರರು ವೇದಿಕೆ ಮೇಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.