ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ಇಲಾಖೆಯಿಂದ ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ (ಸಿಎಆರ್/ಡಿಎಆರ್) ನೇಮಕಾತಿ ಪರೀಕ್ಷೆಗಳು ಹುಬ್ಬಳ್ಳಿ–ಧಾರವಾಡ ಮಹಾನಗರದ 35 ಕೇಂದ್ರಗಳಲ್ಲಿಯೂ ಭಾನುವಾರ ಸುಗಮವಾಗಿ ನಡೆದವು.
ಮಹಾನಗರದಲ್ಲಿ ಒಟ್ಟು 12,300 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದರು. ಬಾಗಲಕೋಟೆ, ವಿಜಯಪುರ, ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪರೀಕ್ಷಾರ್ಥಿಗಳು ಹಾಜರಾಗಿದ್ದರು. ಧಾರವಾಡ ಜಿಲ್ಲೆಯಲ್ಲಿ 75 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಪರೀಕ್ಷೆಯ ಹಿಂದಿನ ದಿನವಾದ ಶನಿವಾರವೇ ಸಾವಿರಾರು ಅಭ್ಯರ್ಥಿಗಳು ಅವಳಿ ನಗರಕ್ಕೆ ಬಂದಿದ್ದರು. ಇದರಿಂದ ಸಾಮಾನ್ಯ ದರದ ಬಹುತೇಕ ವಸತಿಗೃಹಗಳು (ಲಾಡ್ಜ್) ಭರ್ತಿಯಾಗಿದ್ದವು. ವಸತಿಗೃಹ ದೊರೆಯದವರು ದೇವಸ್ಥಾನ, ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಮಲಗಿ ರಾತ್ರಿ ಕಳೆದರು.
ಮಧ್ಯಾಹ್ನ ಪರೀಕ್ಷೆ ಮುಗಿಯುತ್ತಿದ್ದಂತೆ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳು ಭರ್ತಿಯಾಗಿದ್ದವು. ವಿಜಯಪುರ, ಬಾಗಲಕೋಟೆ, ಗದಗ ಮಾರ್ಗಗಳತ್ತ ಬಹುತೇಕ ಬಸ್ಗಳಲ್ಲಿ ನಿಂತುಕೊಳ್ಳಲೂ ಜಾಗವಿಲ್ಲದಂತೆ ಭರ್ತಿಯಾಗಿ ಸಂಚರಿಸುವುದು ಕಂಡುಬಂತು. ಮಹಿಳೆಯರು ಹಾಗೂ ವಯೋವೃದ್ಧರು ಬಸ್ಗಳಲ್ಲಿ ಸಂಚರಿಸುವುದಕ್ಕೆ ಪರದಾಡಿದರು.
ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಹುಬ್ಬಳ್ಳಿ–ಧಾರವಾಡದ ಎಲ್ಲ ಕೇಂದ್ರಗಳಲ್ಲಿ ಶಾಂತಿಯುತವಾಗಿ ಮುಗಿದಿದೆ. ಎಲ್ಲಿಯೂ ಅಕ್ರಮಗಳಾಗಿಲ್ಲರೇಣುಕಾ ಸುಕುಮಾರ ಹು–ಧಾ ಮಹಾನಗರ ಪೊಲೀಸ್ ಆಯುಕ್ತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.