ADVERTISEMENT

ವಾಹನ ವಿಮೆ: ಪರಿಹಾರ ಮೊತ್ತ ನೀಡಲು ಆದೇಶ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:30 IST
Last Updated 25 ಮೇ 2024, 15:30 IST

ಧಾರವಾಡ: ಅಪಘಾತದಲ್ಲಿ ಜಖಂಗೊಂಡಿದ್ದ ವಾಹನದ ವಿಮಾ ಪರಿಹಾರ ಮೊತ್ತವನ್ನು ವಿಮಾದಾರರಿಗೆ ನೀಡುವಂತೆ ಎಚ್‌ಡಿಎಫ್‌ಸಿ ವಿಮಾ ಕಂಪೆನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ.ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಆದೇಶ ನೀಡಿದ್ಧಾರೆ. ವಿಮಾದಾರಗೆ ₹3 ಲಕ್ಷ ವಿಮಾ ಪರಿಹಾರ, ಪ್ರಕರಣದ ವೆಚ್ಚ ₹10 ಸಾವಿರ ಹಾಗೂ ಪರಿಹಾರ ₹10 ಸಾವಿರ ಒಟ್ಟು ₹3.2 ಲಕ್ಷ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?: ಧಾರವಾಡದ ಮಂಜುನಾಥ ಮಡಿವಾಳ ಅವರ ಕಾರು 2021 ಏಪ್ರಿಲ್‌ 18ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಅನ್‍ಮೋದ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ಅಪಘಾತಕ್ಕೀಡಾಗಿತ್ತು. ಕಾರು ಜಖಂಗೊಂಡಿತ್ತು. ರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ADVERTISEMENT

ಮಂಜುನಾಥ ಅವರು ಧಾರವಾಡದ ಮೈಸೂರು ಗ್ಯಾರೇಜ್‌ನಲ್ಲಿ ಕಾರು ರಿಪೇರಿ ಮಾಡಿಸಿ, ರಿಪೇರಿ ಖರ್ಚಿನ ದಾಖಲೆಗಳನ್ನು ಎಚ್‌ಡಿಎಫ್‌ಸಿ ವಿಮಾ ಕಂಪೆನಿಗೆ ಸಲ್ಲಿಸಿದ್ದರು. ವಿಮಾ ಕಂಪನಿಯವರು ಕಾರು ರಿಪೇರಿ ಖರ್ಚು ಪಾವತಿಸಿರಲಿಲ್ಲ. ವಿಮಾ ಕಂಪನಿ ವಿರುದ್ಧ ಅವರು 2023ರ ಏಪ್ರಿಲ್‌ 18ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಮಂಜುನಾಥ ಅವರು ₹9079 ಪಾವತಿಸಿ ವಾಹನ ವಿಮೆ ಮಾಡಿಸಿದ್ಧಾರೆ. ವಿಮೆ ಚಾಲ್ತಿ ಅವಧಿಯಲ್ಲಿ ಅಪಘಾತ ಸಂಭವಿಸಿದ್ದು, ವಿಮಾ ಕಂಪೆನಿಯವರು ವಿಮೆ ಪರಿಹಾರ ಪಾವತಿಸಬೇಕು ಎಂದು ಆಯೋಗವು ನಿರ್ದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.