ನವಲಗುಂದ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಸ್ಥೆಯಲ್ಲಿ ಕೆಲಸ ಮಾಡುವ ಸೇವಾ ಪ್ರತಿನಿಧಿಗಳು ವೀರೇಂದ್ರ ಹೆಗಡೆಯವರ ಆಶಯದಂತೆ ಗ್ರಾಮೀಣ ಜನರ ಬದುಕಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಅಭಿವೃದ್ಧಿಗೆ ಪೂರಕವಾದಂತ ಯೋಜನೆಯ ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು ಎಂದು ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕ ಚಂದ್ರಶೇಖರ.ಜೆ ಹೇಳಿದರು.
ಅವರು ಪಟ್ಟಣದ ಶ್ರೀ ಅಜಾತ ನಾಗಲಿಂಗ ಸ್ವಾಮೀಜಿ ಮಠದಲ್ಲಿರುವ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಸೇವಾ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸೇವಾ ಪ್ರತಿನಿಧಿಗಳು ಸ್ವಸಾಯ ಸಂಘಗಳ ಬಲವರ್ಧನೆ ಹಾಗೂ ಅವರ ಬದುಕಿನ ಯೋಜನೆಗಳಿಗೆ ಸಂಸ್ಥೆಯ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕೆಲಸ ಮಾಡಿ ಎಂದರು.
ಧರ್ಮಸ್ಥಳ ಸಂಸ್ಥೆಯ ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಚಾರ್ಯ ಸೋಮನಾಥ ಮಾತನಾಡಿ, ಸೇವಾ ಪ್ರತಿನಿಧಿಗಳು ಯೋಜನೆಯಲ್ಲಿ ಮಾಡುವ ಕಾರ್ಯಚಟುವಟಿಕೆ ಹಾಗೂ ಸ್ವಸಹಾಯ ಸಂಘಗಳಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಬಗ್ಗೆ, ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನ ಕುರಿತು ತರಬೇತಿ ನೀಡಿದರು.
ಹಿರಿಯ ನಿರ್ದೇಶಕ ಯೋಗೇಶ.ಎ ಅವರು ಸೇವಾ ಪ್ರತಿನಿಧಿಗಳು ಸಂಸ್ಥೆಯ ಕಾರ್ಯಕ್ರಮಗಳನ್ನು ಗ್ರಾಮೀಣ ಮಟ್ಟದಲ್ಲಿ ಜನರಿಗೆ ಅನುಕೂಲವಾಗುವಂತೆ ಅನುಷ್ಠಾನ ಮಾಡಲು ಮಾಹಿತಿ ನೀಡಿದರು. ತಾಲ್ಲೂಕಿನ ಯೋಜನಾಧಿಕಾರಿ ದಿನೇಶ ಶೇರಿಗಾರ, ಐಟಿ ವಿಭಾಗದ ಮಹಾಂತೇಶ, ಕಚೇರಿಯ ವ್ಯವಸ್ಥಾಪಕ ಅಮಿತ್ ಇದ್ದರು. ತರಬೇತಿ ಕಾರ್ಯಗಾರವನ್ನು ಕೃಷಿ ಮೇಲ್ವಿಚಾರಕ ಶಂಕರ ಅರಗೋಳ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.