ADVERTISEMENT

ಧಾರವಾಡ ಕೇಂದ್ರ ಕಾರಾಗೃಹ: ಭದ್ರತೆಗಾಗಿ 4 ವೀಕ್ಷಣಾ ಗೋಪುರ

ಧಾರವಾಡ ಕೇಂದ್ರ ಕಾರಾಗೃಹ ಆವರಣದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿ

ಬಿ.ಜೆ.ಧನ್ಯಪ್ರಸಾದ್
Published 19 ಸೆಪ್ಟೆಂಬರ್ 2024, 5:09 IST
Last Updated 19 ಸೆಪ್ಟೆಂಬರ್ 2024, 5:09 IST
ಧಾರವಾಡದ ಜೈಲು ಪ್ರದೇಶದ ‌(ಪಿ.ಬಿ ರಸ್ತೆ ಪಕ್ಕ) ಕಾಂಪೌಂಡ್‌ ಸಮೀಪ ನಿರ್ಮಿಸುತ್ತಿರುವ ವೀಕ್ಷಣಾ ಗೋಪುರ ಪ್ರಜಾವಾಣಿ ಚಿತ್ರ, ಬಿ.ಎಂ.ಕೇದಾರನಾಥ
ಧಾರವಾಡದ ಜೈಲು ಪ್ರದೇಶದ ‌(ಪಿ.ಬಿ ರಸ್ತೆ ಪಕ್ಕ) ಕಾಂಪೌಂಡ್‌ ಸಮೀಪ ನಿರ್ಮಿಸುತ್ತಿರುವ ವೀಕ್ಷಣಾ ಗೋಪುರ ಪ್ರಜಾವಾಣಿ ಚಿತ್ರ, ಬಿ.ಎಂ.ಕೇದಾರನಾಥ   

ಧಾರವಾಡ: ನಗರದ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ನಿಗಾ ನಿಟ್ಟಿನಲ್ಲಿ ಸುತ್ತ ನಾಲ್ಕು ವೀಕ್ಷಣಾ ಗೋಪುರ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ಶೇ 75ರಷ್ಟು ಮುಗಿದಿದೆ.

ಜೈಲು ಭಾಗದಲ್ಲಿ ಕಣ್ಗಾವಲಿಗೆ ಒಳಭಾಗದಲ್ಲಿ 55 ಹಾಗೂ ಸುತ್ತ(ಹೊರ ವಲಯ) 10 ಒಟ್ಟು 65 ಸಿ.ಸಿ ಟಿವಿ ಕ್ಯಾಮೆರಾಗಳಿವೆ. ನಿಗಾ ಇನ್ನಷ್ಟು ಬಿಗಿಗೊಳಿಸಲು ನಾಲ್ಕೂ ದಿಕ್ಕುಗಳಲ್ಲಿ ವೀಕ್ಷಣಾ ಗೋಪುರ ಸಜ್ಜುಗೊಳಿಸಲಾಗುತ್ತಿದೆ.

‘ಒಂದು ಕೋಟಿ ವೆಚ್ಚದಲ್ಲಿ ಗೋಪುರಗಳು ನಿರ್ಮಾಣವಾಗಲಿವೆ. ಗೋಪುರದ ಎತ್ತರ 30 ಅಡಿ. ಕಾಂಪೌಂಡ್‌ ಸುತ್ತಲಿನ ಚಲನವಲನಗಳ ಮೇಲೆ ನಿಗಾ ಇಡಲು, ಹೊರಗಿನಿಂದ ಜೈಲು ಭಾಗದೊಳಕ್ಕೆ ಯಾರಾದರೂ ಏನಾದರೂ ಎಸೆದರೆ ಪತ್ತೆ ಮಾಡಲು ಅನುಕೂಲವಾಗಲಿದೆ. ಕಾಮಗಾರಿಯನ್ನು ಇನ್ನು ನಾಲ್ಕು ತಿಂಗಳಲ್ಲಿ ಮುಗಿ‌ಸುವುದಾಗಿ ಗುತ್ತಿಗೆದಾರ ತಿಳಿಸಿದ್ಧಾರೆ’ ಎಂದು ಕಾರಾಗೃಹ ಸೂಪರಿಂಟೆಂಡೆಂಟ್‌ ಪಿ.ಮಹದೇವನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬೆಂಗಳೂರು ಜೈಲು ಸುತ್ತ ಗೋಪುರಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಇಲ್ಲಿಯೂ ಈಗ ನಿರ್ಮಿಸಲಾಗುತ್ತಿದೆ. ಗೋಪುರದಲ್ಲಿ 24X7 ಶಸ್ತ್ರಧಾರಿ ಸಿಬ್ಬಂದಿ ಕಾರ್ಯನಿರ್ವಹಣೆಗೆ ವ್ಯವಸ್ಥೆ ಮಾಡಲಾಗುವುದು. ವೀಕ್ಷಣೆಗೆ ಬೈನಾಕ್ಯುಲರ್‌ ನೀಡಲಾಗುವುದು’ ಎಂದು ತಿಳಿಸಿದರು.

ಜೈಲು ಅವರಣದ ಒಟ್ಟು ವಿಸ್ತೀರ್ಣ 59 ಎಕರೆ, ಈ ಪೈಕಿ 19 ಎಕರೆ ಪ್ರದೇಶದಲ್ಲಿ ಜೈಲು ಕಟ್ಟಡ ಇದೆ. ಕಟ್ಟಡದಲ್ಲಿ 12 ಡಾರ್ಮಿಟರಿ ಹಾಗೂ 18 ಸೆಲ್‌ಗಳು ಇವೆ.

ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲೊಬ್ಬರಾದ ಬೆಂಗಳೂರಿನ ಗಿರಿನಗರದ ಧನರಾಜ್‌ ಅಲಿಯಾಸ್‌ ರಾಜು (ನಟ ದರ್ಶನ್‌ ತಂಡದಲ್ಲಿ ಗುರುತಿಸಿಕೊಂಡಿದ್ದವ) ಈ ಜೈಲಿನಲ್ಲಿ ಇದ್ದಾರೆ. ಈತ ಸಹಿತ ಮೂವರನ್ನು ಒಂದು ಸೆಲ್‌ನಲ್ಲಿ ಇರಿಸಲಾಗಿದೆ.

‘ಜೈಲಿನ ಸುತ್ತಲಿನ ಕಾಂಪೌಂಡ್‌ ಗೋಡೆಯ ಮೇಲೆ ಬೇಲಿ (ಫೆನ್ಸಿಂಗ್‌) ನಿರ್ಮಾಣ ಮಾಡಬೇಕು. ಆವರಣ ಪ್ರದೇಶಕ್ಕೆ ಯಾರೂ ಜಿಗಿಯದಂತೆ ಕಡಿವಾಣ ಹಾಕಬೇಕು ಎಂದು ಪೊಲೀಸ್‌ ಇಲಾಖೆ ಸಲಹೆ ನೀಡಿದೆ. ಈ ನಿಟ್ಟಿನಲ್ಲಿ ಕಾಂಪೌಂಡ್‌ ಮೇಲೆ ಮೂರು ಅಡಿ ಬ್ಲೇಡ್‌ ಫೆನ್ಸಿಂಗ್‌ ನಿರ್ಮಾಣಕ್ಕೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಮಹದೇವನಾಯ್ಕ ತಿಳಿಸಿದರು.

ಒಂದೂವರೆ ಶತಮಾನ ಇತಿಹಾಸದ ಕಾರಾಗೃಹ
ಬೆಳಗಾವಿ– ಬೆಂಗಳೂರು ಹೆದ್ದಾರಿ ಬದಿಯ ಈ ಕಾರಾಗೃಹ ಬ್ರಿಟಿಷರ ಕಾಲದ್ದು. 1858ರಲ್ಲಿ ಆರಂಭವಾಗಿರುವ ಈ ಕಾರಾಗೃಹವು 166 ವರ್ಷಗಳ ಚರಿತ್ರೆ ಹೊಂದಿದೆ. 1931ರಲ್ಲಿ ಈ ಕಟ್ಟಡದ ಆವರಣದಲ್ಲಿ ತರುಣ ಬಂದೀಖಾನೆ ಪ್ರಾರಂಭಿಸಲಾಗಿತ್ತು. 1963ರಲ್ಲಿ ಇಲ್ಲಿ ಬಾಲಪರಾಧಿ ಶಾಲೆ ತೆರೆಯಲಾಗಿತ್ತು. 2007ರಲ್ಲಿ ಈ ಜಿಲ್ಲಾ ಉಪ ಕಾರಾಗೃಹವನ್ನು ಕೇಂದ್ರ ಕಾರಾಗೃಹವನ್ನಾಗಿ ಮೇಲ್ದರ್ಜೆಗೇರಿಸಲಾಯಿತು. ಪ್ರಸ್ತುತ ಎರಡು ಜಿಲ್ಲಾ ಕಾರಾಗೃಹ ಒಂದು ಉಪಕಾರಾಗೃಹ ಇದರ ವ್ಯಾಪ್ತಿಯಲ್ಲಿವೆ. 575 ಪುರುಷ ಹಾಗೂ 100 ಮಹಿಳಾ ಒಟ್ಟು 675 ಕೈದಿಗಳನ್ನು ಇಡುವ ಸ್ಥಳಾವಕಾಶ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.