ಹುಬ್ಬಳ್ಳಿ: ‘ಶೋಷಿತ ಸಮುದಾಯಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವಲ್ಲಿ ದಲಿತ ಸಂಘರ್ಷ ಸಮಿತಿ ಕೊಡುಗೆ ಅಪಾರವಾದುದು. ದೌರ್ಜನ್ಯಗಳು ತಗ್ಗಬೇಕಾದರೆ,ಈ ಸಮುದಾಯಗಳು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಬಲರಾಗಬೇಕು’ ಎಂದು ಕುಂದಗೋಳ ಶಾಸಕಿ ಕುಸುಮಾವತಿ ಶಿವಳ್ಳಿ ಹೇಳಿದರು.
ತಾಲ್ಲೂಕಿನ ಗಿರಿಯಾಲ ಗ್ರಾಮದಲ್ಲಿ ಭಾನುವಾರಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ) ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ‘ಪರಿಶಿಷ್ಟ ಸಮುದಾಯಗಳ ಸಾಮಾಜಿಕ ಹಕ್ಕುಗಳು ಹಾಗೂ ಸರ್ಕಾರದ ಅಭಿವೃದಿ ಯೋಜನೆಗಳನ್ನು ಸಮುದಾಯಕ್ಕೆ ದೊರಕಿಸಿ ಕೊಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಜಯ ಗುಂಟ್ರಾಳ ಮಾತನಾಡಿ, ‘ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಡಿಎಸ್ಎಸ್ ಬಲಿಷ್ಠಗೊಳಿಸಬೇಕು. ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಪ್ರೊ.ಬಿ. ಕೃಷ್ಣಪ್ಪ ಅವರ ವೈಚಾರಿಕ ವಿಚಾರಗಳ ನೆಲೆಗಟ್ಟಿಲ್ಲಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮುದಾಯವು ಸಾಮಾಜಿಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು’ ಎಂದು ಹೇಳಿದರು.
‘ದೇಶದಲ್ಲಿ ಪ್ರತಿದಿನ ಹತ್ತು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಬ್ಬರ ಹತ್ಯೆಯಾಗುತ್ತಿದೆ. ನಿರಂತರ ದೌರ್ಜನ್ಯದ ಜೊತೆಗೆ ಸಾಮಾಜಿಕ ಬಹಿಷ್ಕಾರಕ್ಕೆ ಸಮುದಾಯ ತುತ್ತಾಗುತ್ತಿದೆ. ಇದರ ವಿರುದ್ಧ ಸಮುದಾಯ ಎಚ್ಚೆತ್ತುಕೊಳ್ಳಬೇಕು. ಇದೀಗ ಭಾರತದ ಸಂವಿಧಾನವೇ ಅಪಾಯದಲ್ಲಿದೆ. ಮನುವಾದಿಗಳು ಕೋಮು ಸೌಹಾರ್ದ ಹಾಳು ಮಾಡುತಿದ್ದು, ಸಂವಿಧಾನದ ರಕ್ಷಣೆಗೆ ಎಲ್ಲರೂ ಮುಂದಾಗಬೇಕು’ ಎಂದರು.
ಗ್ರಾಮದ ಪದಾಧಿಕಾರಿಗಳು ಹಾಗೂ ಮಹಿಳಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುರೇಶ್ ಚಂದಪ್ಪನವರ, ಅಂಚಟಗೇರಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಹದೇವ್ ಮಾಳಗಿ, ಮಾರುತಿ ಕಟ್ಟಿಮನಿ, ವಕೀಲರಾದ ಶ್ರೀಧರ್ ದೊಡ್ಡಮನಿ, ಡಿ.ಎಂ. ಗಾಡದ, ಮಲ್ಲೇಶ್ ಕರಮಡಿ, ಸೋಮು ಕೆಂಚಕ್ಕನವರ, ಹನುಮಂತ ಬೆನಕಲ, ಸಿದಪ್ಪ ಚಂದಾಪುರ, ಗೋವಿಂದ್ ವಾಲಿಕಾರ, ಡಿಎಸ್ಎಸ್ ಗಿರಿಯಾಲ್ ಗ್ರಾಮ ಸಂಚಾಲಕರಾದ ಆನಂದ್ ನಾಗಣ್ಣವರ, ಗಾಳೆಪ್ಪಾ ದ್ವಾಸಾಲಕೇರಿ, ಕೃಷ್ಣಾ ಬಳ್ಳಾರಿ, ದತ್ತಪ್ಪ ಅಪುಸಪೆಟ್, ರಾಜು ನಾಗರಾಳ, ಕರುಣಾಕುಮಾರ್ ಸೋಮರಡ್ಡಿ, ನಾಗರಾಜ ದೊಡ್ಡಮನಿ, ವೆಂಕಟೇಶ್ ಪಾಲವಾಯಿ, ಗೋಪಾಲ ಯರಗುಂಟಿ, ವಿಜಯಕುಮಾರ್ ಗಬ್ಬೂರ, ಚಂದ್ರು ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.