ADVERTISEMENT

ಗಾಂಜಾ ಮಾರಾಟ, ಆರೋಪಿ ಬಂಧನ: ₹96.50 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 7:53 IST
Last Updated 31 ಜುಲೈ 2024, 7:53 IST
   

ಹುಬ್ಬಳ್ಳಿ: ನಗರದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಶಹರ ಠಾಣೆ ಪೊಲೀಸರು, ₹ 85 ಸಾವಿರ ಮೌಲ್ಯದ ಗಾಂಜಾ, ₹ 96.50 ಲಕ್ಷ ನಗದು, ಕಾರು ಸೇರಿದಂತೆ ಒಟ್ಟು ₹ 1.06 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಓಂಪ್ರಕಾಶ ಬಾರಮೇರ್ ಬಂಧಿತ ಆರೋಪಿ. ರೈಲ್ವೆ ನಿಲ್ದಾಣದ ಬುಗಿಬುಗಿ ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾಗ, ಎಸಿಪಿ ಉಮೇಶ ಚಿಕ್ಕಮಠ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಂ.ಎಂ. ತಹಶೀಲ್ದಾರ್ ನೇತೃತ್ವದ ತಂಡ ಮಂಗಳವಾರ ಸಂಜೆ ಕಾರ್ಯಾಚರಣೆ ನಡೆಸಿತ್ತು.

'ಆರೋಪಿ ಆರು ತಿಂಗಳಿನಿಂದ ಕೇಶ್ವಾಪುರದಲ್ಲಿ ಕೊಠಡಿಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ. ಮಾಹಿತಿ ಸಂಗ್ರಹಿಸಿ ಅಲ್ಲಿ ಪರಿಶೀಲನೆ ನಡೆಸಿದಾಗ ₹96.50 ಲಕ್ಷ ನಗದು, 50 ಸಾವಿರ ಮೌಲ್ಯದ ಐಪೋನ್, ವಿವಿಧ ಬ್ಯಾಂಕಿನ 30 ಎ.ಟಿ.ಎಮ್. ಕಾರ್ಡ್‌‌ಗಳು, 36 ಚೆಕ್‌ಗಳು, 4 ಪಾಸ್‌ಬುಕ್‌, 9 ಪಾನ್‌ಕಾರ್ಡ್, 7 ರಬ್ಬರ್ ಸ್ಟಾಂಪ್, 6 ಸ್ವಾಪಿಂಗ್ ಯಂತ್ರಗಳು ಪತ್ತೆಯಾಗಿವೆ' ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

'ವಶಪಡಿಸಿಕೊಂಡಿರುವ 888 ಗ್ರಾಮ್ ಗಾಂಜಾವನ್ನು ರಾಜಸ್ಥಾನದ ಅಶೋಕಕುಮಾರ ಎಂಬಾತ ಒಂದು ವಾರದ ಹಿಂದೆ ಹುಬ್ಬಳ್ಳಿಗೆ ತಂದಿರುವುದಾಗಿ ಆರೋಪಿ ಹೇಳಿದ್ದಾನೆ.‌ ಅವನು ಹುಬ್ಬಳ್ಳಿ ಸುತ್ತಮುತ್ತಲಿನ ಬೇರೆ ತಾಲ್ಲೂಕಿಗಳಿಗೆ ಭೇಟಿ ನೀಡುತ್ತ ಕೆಲವರ ಸಂಪರ್ಕದಲ್ಲಿರುವುದು, ರಾಯಚೂರಿಗೆ ಭೇಟಿ ನೀಡಿದ್ದು, ಗೋವಾದಲ್ಲಿ ವಾಸ ಮಾಡಿರುವ ಕುರಿತು ಹೇಳಿದ್ದಾನೆ. ಇದೇ ವ್ಯವಹಾರಕ್ಕಾಗಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ತೆರೆಯುತ್ತಿದ್ದನೇ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ' ಎಂದರು.

'ನಕಲಿ ಆಧಾರ ಕಾರ್ಡ್ ಮಾಡಲು ಆರೋಪಿ ಗೋವಾದಲ್ಲಿ ತರಬೇತಿ ಪಡೆದು, ವ್ಯಾಪಾರಸ್ಥರ ಹೆಸರಲ್ಲಿ ನಕಲಿ ಬಿಲ್ ಸೃಷ್ಟಿಸುತ್ತಿರುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ಗಾಂಜಾ ವ್ಯವಹಾರದ ಜೊತೆ ನಕಲಿ ಆಧಾರ ಕಾರ್ಡ್ ಸೃಷ್ಟಿ ಮಾಡಿ ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆಯಲು ಒಬ್ಬನಿಂದ ಸಾಧ್ಯವಿಲ್ಲ. ಬೇರೆಯವರ ಸಹಕಾರ ಇರುವ ಸಾಧ್ಯತೆಯಿದೆ. ಇದು ಗಂಭೀರ ಪ್ರಕರಣವಾಗಿದ್ದು, ಆರೊಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತೇವೆ' ಎಂದು ಹೇಳಿದರು.

ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿಗಳಾದ ಉಮೇಶ ಚಿಕ್ಕಮಠ, ಶಿವಪ್ರಕಾಶ ನಾಯ್ಕ್, ಇನ್‌ಸ್ಪೆಕ್ಟರ್ ಎಂ.ಎಂ.‌ ತಹಶೀಲ್ದಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.