ಧಾರವಾಡ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ಸರ್ಕಾರವು ನಿರ್ಧರಿಸುವುದು ಸರಿ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರದ ನಿರ್ಧಾರ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಲಿ, ಕೋರ್ಟ್ ಮೆಟ್ಟಿಲು ಏರಲಿ. ಕೋರ್ಟ್ ವಿಚಾರಣೆ ನಡೆಸುತ್ತದೆ’ಎಂದು ಉತ್ತರಿಸಿದರು.
‘ನಿವೇಶನಗಳನ್ನು ವಾಪಸ್ ನೀಡಿರುವುದು ಮಲ್ಲಿಕಾರ್ಜುನ ಖರ್ಗೆ ಅವರ ದೊಡ್ಡತನ. ಖರ್ಗೆ ಅವರು ರಾಜೀನಾಮೆ ಯಾಕೆ ನೀಡಬೇಕು’ ಎಂದು ಪ್ರಶ್ನಿಸಿದರು.
‘ಮುಡಾ ಪ್ರಕರಣದಲ್ಲಿ ಪಾದಯಾತ್ರೆ ಮಾಡಿದವರ ವಿರುದ್ಧವೇ ಎಫ್ಐಆರ್ಗಳಿವೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರದ ಶೇ 39 ರಷ್ಟು ಸಚಿವರ ವಿರುದ್ಧ ಪ್ರಕರಣಗಳು ಇವೆ. ಅವರೆಲ್ಲ ರಾಜೀನಾಮೆ ಕೊಟ್ಟಿದ್ಧಾರಾ?’ ಎಂದರು.
‘ಪ್ರೇರಣಾ ಟ್ರಸ್ಟ್ಗೆ ಎಷ್ಟು ದುಡ್ಡು ಬಂದಿತ್ತು? ಟ್ರಸ್ಟ್ನ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡಿರಲಿಲ್ಲವೇ? ಬಿಜೆಪಿಯವರು ಹೊಸದಾಗಿ ವಾಷಿಂಗ್ ಮೆಷಿನ್ವೊಂದನ್ನು ಕಂಡುಹಿಡಿದಿದ್ದಾರೆ. ಆ ಮೆಷಿನ್ಗೆ ಹಾಕಿದ ತಕ್ಷಣ ಎಲ್ಲರು ಬೆಳ್ಳಗಾಗಿ ಬಿಡುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಅತಿಥಿ ಶಿಕ್ಷಕರು ಮತ್ತು ಬಿಸಿಯೂಟ ಅಡುಗೆ ಸಹಾಯಕರ ಸಂಬಳ ಹೆಚ್ಚಿಸುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ಧಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.