ADVERTISEMENT

ಹುಬ್ಬಳ್ಳಿ: ಯಾರಾಗಲಿದ್ದಾರೆ ಹುಬ್ಬಳ್ಳಿ–ಧಾರವಾಡ ಪಾಲಿಕೆ ನೂತನ ಮೇಯರ್

ಮೇಯರ್, ಉಪಮೇಯರ್ ಅವಧಿ ಜೂನ್ 19ಕ್ಕೆ ಕೊನೆ; ನಿಗದಿಯಾಗದ ಚುನಾವಣಾ ದಿನಾಂಕ

ಸತೀಶ ಬಿ.
Published 14 ಜೂನ್ 2024, 7:05 IST
Last Updated 14 ಜೂನ್ 2024, 7:05 IST
ಹುಬ್ಬಳ್ಳಿಯಲ್ಲಿನ ಹು–ಧಾ ಮಹಾನಗರ ಪಾಲಿಕೆ ಕಚೇರಿ
ಹುಬ್ಬಳ್ಳಿಯಲ್ಲಿನ ಹು–ಧಾ ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 23ನೇ ಅವಧಿಗೆ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಶೀಘ್ರವೇ ಚುನಾವಣೆ ನಡೆಯಲಿದ್ದು, ಅವಳಿ ನಗರದ ಪ್ರಥಮ ಪ್ರಜೆ ಯಾರಾಗುವರು ಎಂಬುದು ಕುತೂಹಲ ಮೂಡಿಸಿದೆ.

ಸದ್ಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಅಧಿಸೂಚನೆಯ ಪ್ರಕಾರ, ಮೇಯರ್ ಸ್ಥಾನ ಹಿಂದುಳಿದ ವರ್ಗ ‘ಎ’ ಪುರುಷ ಮತ್ತು ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.

ಈಗಿನ ಮೇಯರ್‌ ಮತ್ತು ಉಪ ಮೇಯರ್ ಅವರ ಅವಧಿ ಇದೇ 19ರಂದು ಪೂರ್ಣಗೊಳ್ಳಲಿದೆ. ಆದರೆ, ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಚುನಾವಣೆ ನೀತಿ ಸಂಹಿತೆ ಕಾರಣ ದಿನಾಂಕ ನಿಗದಿ ವಿಳಂಬವಾಗಿದ್ದು, ಶೀಘ್ರ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. 

ADVERTISEMENT

82 ಸದಸ್ಯ ಬಲದ ಪಾಲಿಕೆಯಲ್ಲಿ 39 ಬಿಜೆಪಿ, 33 ಕಾಂಗ್ರೆಸ್, 3 ಎಐಎಂಐಎಂ, 6 ಜನ ಪಕ್ಷೇತರ ಮತ್ತು ಒಬ್ಬ ಜೆಡಿಎಸ್‌ ಸದಸ್ಯರಿದ್ದಾರೆ. ಪಕ್ಷೇತರರಲ್ಲಿ ಮೂವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ.

ಕಳೆದ ಚುನಾವಣೆ ವೇಳೆ ವಿಪ್‌ ಉಲ್ಲಂಘಿಸಿದ ಹಿನ್ನೆಲೆಯಲ್ಲಿ 54ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಸರಸ್ವತಿ ವಿನಾಯಕ ಧೋಂಗಡಿ ಅವರನ್ನು ಮಹಾನಗರ ಪಾಲಿಕೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಹೀಗಾಗಿ ಬಜೆಪಿಯ ಬಲ 41. ಜನಪ್ರತಿನಿಧಿಗಳ ಮತಗಳನ್ನೂ ಸೇರಿಸಿದರೆ ಬಿಜೆಪಿಗೆ ‘ಅಧಿಕಾರ’ ಸುಲಭವಾಗಿ ಸಿಗಲಿದೆ.

22ನೇ ಅವಧಿಯಲ್ಲಿ ಮೇಯರ್ ಮತ್ತು ಉಪಮೇಯರ್‌ ಸ್ಥಾನವನ್ನು ಹುಬ್ಬಳ್ಳಿಗೆ ನೀಡಲಾಗಿತ್ತು. ಈ ಬಾರಿ ಮೇಯರ್ ಸ್ಥಾನವನ್ನು ಧಾರವಾಡ ಮತ್ತು ಉಪಮೇಯರ್ ಸ್ಥಾನವನ್ನು ಹುಬ್ಬಳ್ಳಿ ನೀಡುವ ಸಾಧ್ಯತೆ ಇದೆ.

ಬಿಜೆಪಿಯಲ್ಲಿ ಮೇಯರ್ ಸ್ಥಾನಕ್ಕೆ ಮೀಸಲಾತಿ ಅನ್ವಯ ರಾಮಣ್ಣ ಬಡಿಗೇರ, ತಿಪ್ಪಣ್ಣ ಮಜ್ಜಗಿ, ಸತೀಶ ಹಾನಗಲ್‌, ಬೀರಪ್ಪ ಖಂಡೇಕಾರ, ಉಮೇಶಗೌಡ ಕೌಜಗೇರಿ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ರಾಮಣ್ಣ ಅವರು ನಾಲ್ಕನೇ ಬಾರಿಗೆ ಪಾಲಿಕೆಗೆ ಆಯ್ಕೆಯಾಗಿದ್ದು, ಹಿರಿಯ ಸದಸ್ಯರಾಗಿದ್ದಾರೆ. ತಿಪ್ಪಣ್ಣ ಮಜ್ಜಗಿ ಅವರು ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದು, ಈ ಹಿಂದೆ ಅವರ ಪತ್ನಿ ಮೇಯರ್ ಆಗಿದ್ದರು. ಅದರ ಜತೆಗೆ ಬೀರಪ್ಪ ಖಂಡೇಕಾರ, ಉಮೇಶಗೌಡ ಅವರು ಸಹ ಅವಳಿ ನಗರದ ಪ್ರಥಮ ಪ್ರಜೆಯಾಗಲು ಕಸರತ್ತು ನಡೆಸುತ್ತಿದ್ದಾರೆ. ಇವರಲ್ಲಿ ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ರಾಮಣ್ಣ ಬಡಿಗೇರ ಅವರು, ‘ಜನ ಯಾವುದಾದರೂ ಕೆಲಸಕ್ಕೆ ಪಾಲಿಕೆಗೆ ಹೋದರೆ ಹಿಡಿ ಶಾಪ ಹಾಕುವಂತಹ ಪರಿಸ್ಥಿತಿ ಇದೆ. ಪಕ್ಷದ ವರಿಷ್ಠರು ಅವಕಾಶ ಕಲ್ಪಿಸಿದರೆ ಜನಸ್ನೇಹಿ ಆಡಳಿತ ನೀಡಲು ಪ್ರಯತ್ನಿಸುತ್ತೇನೆ. ವಲಯವಾರು ಕುಂದುಕೊರತೆ ಸಭೆ, ಜನತಾ ದರ್ಶನ ನಡೆಸಲಾಗುವುದು. ಕಾಲಮಿತಿಯಲ್ಲಿ ಜನರ ಅರ್ಜಿಗಳನ್ನು ವಿಲೇವಾರಿ ಮಾಡಲು ಪ್ರಯತ್ನಿಸಲಾಗುವುದು’ ಎಂದರು.

ಉಪ ಮೇಯರ್ ಸ್ಥಾನಕ್ಕೆ ದುರ್ಗಮ್ಮ ಶಶಿಕಾಂತ ಬಿಜವಾಡ (ವಾರ್ಡ್ ಸಂಖ್ಯೆ 69), ಚಂದ್ರಿಕಾ ಮೇಸ್ತ್ರಿ (ವಾರ್ಡ್ ಸಂಖ್ಯೆ 56) ಅವರು ಪ್ರಮುಖ ಆಕಾಂಕ್ಷಿಗಳಿದ್ದಾರೆ. ದುರ್ಗಮ್ಮ ಅವರಿಗೆ ಉಪಮೇಯರ್ ಸ್ಥಾನ ಒಲಿಯುವ ಸಾಧ್ಯತೆ ಇದೆ.

ಕಾಂಗ್ರೆಸ್ ಕಸರತ್ತು

ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಜಗದೀಶ ಶೆಟ್ಟರ್ ಅವರು ಕಾಂಗ್ರೆಸ್ ಸೇರಿದ್ದರು. ಈ ಹಿನ್ನೆಲ್ಲೆಯಲ್ಲಿ ಅವರ ಬೆಂಬಲಿಗ ಮಹಾನಗರ ಪಾಲಿಕೆ ಸದಸ್ಯರನ್ನು ಸೆಳೆದು ಕಾಂಗ್ರೆಸ್ ಅಧಿಕಾರ ಹಿಡಿಯಲು ಕಸರತ್ತು ನಡೆಸಿತ್ತು. ಈ ಹಿನ್ನೆಯಲ್ಲಿ ಬಿಜೆಪಿ ಮುಖಂಡರು ತನ್ನ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಸದಸ್ಯರನ್ನು ದಾಂಡೇಲಿಯ ರೆಸಾರ್ಟ್‌ಗೆ ಕರೆದೊಯ್ದಿದ್ದರು. ಈ ಬಾರಿ ಜಗದೀಶ ಶೆಟ್ಟರ್ ಪುನಃ ಬಿಜೆಪಿಗೆ ಮರಳಿದ್ದರಿಂದ ಅಂತಹ ಸಾಧ್ಯತೆ ಇಲ್ಲ.

ಕಾಂಗ್ರೆಸ್ 33 ಸದಸ್ಯರನ್ನು ಹೊಂದಿದೆ. ಇಬ್ಬರು ಪಕ್ಷೇತರ ಸದಸ್ಯರು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದರಿಂದ ಸಂಖ್ಯಾಬಲ 35 ಆಗುತ್ತದೆ. ಎಐಎಂಐಎಂ ಸದಸ್ಯರು ಕಳೆದ ಚುನಾಣೆಯಲ್ಲಿ ಯಾವ ಪಕ್ಷಕ್ಕೂ ಬೆಂಬಲ ನೀಡಿರಲಿಲ್ಲ. ಈ ಬಾರಿಯೂ ತಟಸ್ಥವಾಗಿ ಉಳಿಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಮೇಯರ್, ಉಪಮೇಯರ್‌ ಚುನಾವಣೆಯಲ್ಲಿಯೂ ಜೆಡಿಎಸ್ ಸದಸ್ಯ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ.

ಮೇಯರ್ ಉಪಮೇಯರ್ ಚುನಾವಣೆ ಸಂಬಂಧ ಮತದಾರರ ಪಟ್ಟಿಯೊಂದಿಗೆ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ

–ಈಶ್ವರ ಉಳ್ಳಾಗಡ್ಡಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.