ಕಳಸ (ಗುಡಗೇರಿ): ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ವಿತರಣೆ ಮಾಡುವ ಆಹಾರ ಕಳಪೆ ಎಂದು ಗ್ರಾಮಸ್ಥರು ವಾಹನ ದಿಗ್ಬಂಧನ ಹಾಕಿದ್ದಕ್ಕೆ ಶನಿವಾರ ಸ್ಥಳಕ್ಕೆ ಸಿಡಿಪಿಒ ಶಾರದಾ ನಾಡಗೌಡ್ರ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಮಾಲೋಚಿಸಿ ಸಂಬಂಧಿಸಿದವರಿಗೆ ನೋಟಿಸ್ ಜಾರಿಗೆ ಮಾಡಿದ್ದಾರೆ.
ಅಂಗನವಾಡಿ ಕೇಂದ್ರಕ್ಕೆ ಆಹಾರ ಸರಬರಾಜು ಮೇಲ್ವಿಚಾರಕರ ಜೊತೆ ಆಗಮಿಸಿ ಪರಿಶೀಲಿಸಿ ಆಹಾರ ಪದಾರ್ಥಗಳನ್ನು ಕೆಲವು ಗುಣಮಟ್ಟ ಇಲ್ಲದೆ ಇರುವುದನ್ನು ವಿತರಣೆ ಮಾಡುವ ಎಂ.ಎಸ್.ಪಿ ಟಿ ಸಿ ಮರಳಿಸಿ ಗುಣಮಟ್ಟದ ಪದಾರ್ಥಗಳನ್ನು ಕಳುಹಿಸಿಬೇಕೆಂದು ತಾಕೀತು ಮಾಡಿದರು.
ಇಲಾಖೆ ನಿರ್ಲಕ್ಷತೆಯಿಂದ ಚಿಕ್ಕ ಮಕ್ಕಳಿಗೆ ಗುಣಮಟ್ಟದ ಆಹಾರ ಪದಾರ್ಥಗಳು ದೊರೆಯುತ್ತಿಲ್ಲ. ಜೊತೆಗೆ ಬಾಣಂತಿಯರಿಗೆ, ಕಿಶೋರಿಯರಿಗೆ ಸಮರ್ಪಕವಾದ ಆಹಾರ ಪೂರೈಕೆ ಮಾಡದೇ ಸರ್ಕಾರದ ಸೌಲಭ್ಯಗಳು ಕಂಡವರ ಪಾಲಾಗುತ್ತಿದೆ ಎಂದು ನಾಗರಿಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಿಡಿಪಿಒ ಶಾರದಾ ನಾಡಗೌಡ್ರ, ‘ಪ್ರತಿ ತಿಂಗಳ ಆಹಾರ ಪದಾರ್ಥಗಳು ಕೇಂದ್ರಕ್ಕೆ ವಿತರಣೆ ಮಾಡುವಾಗ ಬಾಲ ವಿಕಾಸ ಸಮಿತಿ ಹಾಗೂ ಓಣಿಯ ಮುಖಂಡ ಕರೆದು ಪರಿಶೀಲನೆ ಮಾಡಿದ ನಂತರ ಕೇಂದ್ರದ ಒಳಗೆ ತೆಗೆದುಕೊಳ್ಳುವಂತೆ ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಇನ್ನು ಮುಂದೆ ಹೀಗೆ ಆಗದಂತೆ ನಾವು ಸಹ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಆಹಾರ ವಿತರಣೆ ಮಾಡುವ ಕೇಂದ್ರಕ್ಕೆ ಹಾಗೂ ಇಲ್ಲಿನ ಅಂಗನವಾಡಿ ಕಾರ್ಯಕರ್ತರಿಗೆ ನೋಟಿಸ್ ಜಾರಿಗೆ ಮಾಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.