ಹುಬ್ಬಳ್ಳಿ: ಇಲ್ಲಿನ ಮೂರು ಸಾವಿರ ಮಠದ ಶಾಲಾ ಆವರಣದಲ್ಲಿರುವ ಮೂಜಗಂ ಸಭಾಭವನದಲ್ಲಿ ಸಹಜ ಸಮೃದ್ಧ ಸಂಸ್ಥೆಯಿಂದ ಆಯೋಜಿಸಿದ್ದ ‘ಸಾವಯವ ಮತ್ತು ಹಲಸಿನ ಹಬ್ಬ’ಕ್ಕೆ ಭಾನುವಾರ ತೆರೆಬಿದ್ದಿತು.
ಕಾರ್ಯಕ್ರಮದ ಪ್ರಯುಕ್ತ ವಿವಿಧ ಸ್ಪರ್ಧೆಗಳು ಜರುಗಿದವು. ಒಂದರಿಂದ ನಾಲ್ಕು ಮತ್ತು ಐದರಿಂದ ಏಳನೇ ತರಗತಿವರೆಗಿನ ಮಕ್ಕಳಿಗೆ ‘ನಾ ಕಂಡಂತೆ ಹಲಸು’ ಕುರಿತು ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 80 ಮಕ್ಕಳು ಭಾಗವಹಿಸಿದ್ದರು.
1ರಿಂದ 4ನೇ ತರಗತಿ ವಿಭಾಗದಲ್ಲಿ ಧ್ವನಿ ಎಚ್.ಕರ್ವಾ (ಪ್ರಥಮ), ಸಂಸ್ಕೃತಿ ಎಸ್. ಹಿರೇಮಠ (ದ್ವಿತೀಯ), ಸೃಷ್ಟಿ ಎಸ್. ಚೌವಾಣ್ (ತೃತೀಯ) ಬಹುಮಾನ ಗಳಿಸಿದರೆ, 5ರಿಂದ 7ನೇ ತರಗತಿ ವಿಭಾಗದಲ್ಲಿ ಸಾನ್ವಿ ಯರಗುಪ್ಪಿ (ಪ್ರಥಮ), ಭುವನಾ ಎಸ್.ಟಿ., (ದ್ವಿತೀಯ) ಹಾಗೂ ಉನ್ನತಿ ಜಿ. ತ್ರಾಸಿ (ತೃತೀಯ) ಬಹುಮಾನ ಪಡೆದರು. ಶಿಲ್ಪಕಲಾ ಎಂ. ಬಂಕಾಪುರ ಹಾಗೂ ನಾಗರತ್ನ ಮೂರಶಿಳ್ಳಿ ಸ್ಪರ್ಧೆಯ ತೀರ್ಪುಗಾರರಾಗಿದ್ದರು.
ಹಲಸಿನ ತೊಳೆ ತಿನ್ನುವ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಮಂಜು ಹೆಬ್ಬಳ್ಳಿ (ಪ್ರಥಮ), ನಾಗರಾಜ ಹುಲಗೂರು (ದ್ವಿತೀಯ), ಸಂದೀಪ್ ಎಂ.ಬಡ್ಡಿ (ತೃತೀಯ) ಹಾಗೂ ಮಹಿಳೆಯರ ವಿಭಾಗದಲ್ಲಿ ಲೀಲಾವತಿ ಚನ್ನವೀರಪ್ಪ (ಪ್ರಥಮ), ನಾಗರತ್ನಾ (ದ್ವಿತೀಯ) ಹಾಗೂ ಕಮಲಮ್ಮ (ತೃತೀಯ) ಬಹುಮಾನ ಪಡೆದರು.
ಹುಬ್ಬಳ್ಳಿಯ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ರವೀಶ್ ಸಿ.ಆರ್, ಕೃಷಿ ತಜ್ಞ ಡಾ. ಪ್ರಕಾಶ ಭಟ್ ಬಹುಮಾನ ವಿತರಿಸಿದರು. ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ. ಕೃಷ್ಣಪ್ರಸಾದ್, ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಜೀವ ಧುಮಕನಾಳ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ದೇಸಿ ಕೃಷಿಕರ ಬಳಗದ ಸಂಚಾಲಕ ಮೋತಿಲಾಲ ರಾಠೋಡ ಇದ್ದರು.
ದಿನವಿಡೀ ಸುರಿದ ಜಿಟಿಜಿಟಿ ಮಳೆಯ ಮಧ್ಯೆಯೂ ಹಲಸಿನ ಖಾದ್ಯ, ಮೌಲ್ಯವರ್ಧಿತ ಉತ್ಪನ್ನ, ಸಸಿಗಳ ಖರೀದಿ ಜೋರಾಗಿತ್ತು. 2 ದಿನದಲ್ಲಿ ತಿಪಟೂರಿನ ‘ಶಂಕರ ಹಲಸು’ ತಳಿಯ 200 ಸಸಿ, ಮಳಲಿಯ ಯಶಸ್ವಿನಿ ಮಹಿಳಾ ಸಂಘದ ನರ್ಸರಿಯಿಂದ 150 ಸಸಿ, ಪುತ್ತೂರಿನ ನರ್ಸರಿಯ 850 ಸಸಿಗಳು ಮಾರಾಟವಾದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.