ADVERTISEMENT

ನಾಸಿರ್ ಹುಸೇನ್ ವಿರುದ್ಧವೂ ಪ್ರಕರಣ ದಾಖಲಿಸಿ; ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 13:42 IST
Last Updated 5 ಮಾರ್ಚ್ 2024, 13:42 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಹೀಗಾಗಿ ನಾಸಿರ್‌ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಈ ಪ್ರಕರಣ ಇತ್ಯರ್ಥವಾಗುವವರೆಗೂ ಅವರು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಬಾರದು’ ಎಂದು ಬಿಜೆಪಿ ಮುಖಂಡ ಜಗದೀಶ ಶೆಟ್ಟರ್‌ ಹೇಳಿದರು.

‘ನಾಸಿರ್ ಹುಸೇನ್ ನಿಜವಾದ ದೇಶಭಕ್ತರಾಗಿದ್ದರೆ, ಘೋಷಣೆ ಕೂಗಿದವರ ಕಪಾಳಕ್ಕೆ ಬಾರಿಸಬೇಕಿತ್ತು. ಅದರ ಬದಲು ಮಾಧ್ಯಮದವರ ಮೇಲೆಯೇ ಹರಿಯಾಯ್ದರು. ಈ ಘಟನೆಯನ್ನು ಕಾಂಗ್ರೆಸ್‌ನವರು ಖಂಡಿಸಲಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಘೋಷಣೆ ಕೂಗಿದ್ದನ್ನು ಕಾಂಗ್ರೆಸ್‌ನವರು ಮೊದಲು ಅಲ್ಲಗಳೆದರು. ಈಗ ಏಕೆ ಮೂವರನ್ನು ಬಂಧಿಸಲಾಗಿದೆ? ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರಿಗೆ ಅಧಿಕಾರದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು’ ಎಂದು ಅವರು ಆಗ್ರಹಿಸಿದರು.

ADVERTISEMENT

ವರಿಷ್ಠರು ಹೇಳಿದ ಕಡೆ ಸ್ಪರ್ಧೆ: 

‘ಲೋಕಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡುವ ವಿಷಯ ವರಿಷ್ಠರಿಗೆ ಬಿಟ್ಟಿದ್ದು. ಧಾರವಾಡ, ಹಾವೇರಿ, ಬೆಳಗಾವಿ ಸೇರಿದಂತೆ ವರಿಷ್ಠರು ಸೂಚಿಸಿದ ಕ್ಷೇತ್ರಗಳಲ್ಲಿ ಸ್ಪರ್ಧಿಸುವೆ. ಒಂದು ವೇಳೆ ಸ್ಪರ್ಧೆ ಬೇಡ, ಚುನಾವಣಾ ಪ್ರಚಾರ ಮಾಡುವಂತೆ ಹೇಳಿದರೆ ಅದಕ್ಕೂ ಸಿದ್ಧ’ ಎಂದು ಶೆಟ್ಟರ್ ತಿಳಿಸಿದರು.

ರವಿಕುಮಾರ

ಪಾಕ್‌ ಪರ ಘೋಷಣೆಯಲ್ಲಿ ನಾಸಿರ್‌ ಎ1: ರವಿಕುಮಾರ್‌

ಬಳ್ಳಾರಿ/ವಿಜಯನಗರ: ‘ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಪ್ರಕರಣದಲ್ಲಿ ನಾಸಿರ್‌ ಹುಸೇನ್‌ ಅವರೇ ಎ1 ಆರೋಪಿ. ಅವರನ್ನೂ ತನಿಖೆಗೆ ಒಳಪಡಿಸಬೇಕು’ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ಸಚೇತಕ ರವಿಕುಮಾರ್‌ ಆಗ್ರಹಿಸಿದರು.  ‘ಪ್ರಕರಣದಲ್ಲಿ ಮೂವರನ್ನು ಮಾತ್ರ ಬಂಧಿಸಲಾಗಿದೆ. ಉಳಿದವರನ್ನು ಬಂಧಿಸಿಲ್ಲ. ಅಂದು ಪಾಸ್‌ ಪಡೆದು ವಿಧಾನಸೌಧಕ್ಕೆ ಬಂದ 34 ಜನರನ್ನೂ ಬಂಧಿಸಬೇಕು‘ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ‘ಇದು ಕೇವಲ ಪಾಕಿಸ್ತಾನದ ಪರ ಘೋಷಣೆಯಲ್ಲ. ಭಾರತದ ವಿರುದ್ಧ ಕೂಗಿದ ಧಿಕ್ಕಾರ. ಸರ್ಕಾರ ‘ಮೈ ಬ್ರದರ್ಸ್‌‘ ಪಾಲಿಸಿ ಅನುಸರಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.