ಧಾರವಾಡ: ‘ಮೌಲ್ವಿ ತನ್ವಿರ್ ಹಾಶ್ಮಿ ಕುಟುಂಬದವರ ಜೊತೆ ತಾವು ವ್ಯವಹಾರ ಹೊಂದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಟ್ವೀಟ್ ಮಾಡಿದ್ದಾರೆ. ಹಾಶ್ಮಿ ಅವರ ಮಾವ (ತಾಯಿಯ ಸಹೋದರ) ಎಂ.ಎಂ.ಪೀರಜಾದೆ ಮತ್ತು ಶಾಸಕ ಯತ್ನಾಳ ಪಾಲುದಾರರಾಗಿರುವ ಆಸ್ತಿ ದಾಖಲೆ ಇದೆ’ ಎಂದು ನಗರದ ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್ ತಮಟಗಾರ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಅವರು, ವಿಜಯಪುರದ ವಾರ್ಡ್ ನಂಬರ್ 3ರಲ್ಲಿನ ಎ.ಜಿ.ರಸ್ತೆ ಭಾಗದ ಸಿಟಿಎಸ್ ಸಂಖ್ಯೆ 1644/3ರ 594 ಚದರ ಅಡಿ ವಿಸ್ತೀರ್ಣದ ಜಾಗವು (ಟೂರಿಸ್ಟ್ ಹೋಟೆಲ್ ಸ್ಥಳ) ಎಂ.ಎಂ.ಪೀರ್ಜಾದೆ ಮತ್ತು ಬಸನಗೌಡ ರಾಮನಗೌಡ ಅವರ ಹೆಸರಿನಲ್ಲಿದೆ. ಯತ್ನಾಳ ಅವರ ಟ್ವೀಟ್ನಲ್ಲಿ ಹುರುಳಿಲ್ಲ’ ಎಂದು ಕುಟುಕಿದರು.
‘ಯತ್ನಾಳ ಅವರು ಜೆಡಿಎಸ್ನಲ್ಲಿದ್ದಾಗ ಮುಸ್ಲಿಮರ ಜೊತೆಗಿದ್ದರು. ಈಗ ಅಧಿವೇಶನದಲ್ಲಿ ಗೊಂದಲ ಮೂಡಿಸಲು ಅವರು ಆರೋಪ ಮಾಡುವುದರಲ್ಲಿ ತೊಡಗಿದ್ದಾರೆ. ವೃಥಾ ಆರೋಪ ಮಾಡುವುದನ್ನು ಬಿಟ್ಟು, ಅಭಿವೃದ್ಧಿ ಕಡೆಗೆ ಅವರು ಗಮನ ಹರಿಸಬೇಕು’ ಎಂದರು.
ಎಸ್.ಎಸ್.ಸರ್ಗಿರೋ, ಬಿ.ಎ.ಜಹಗೀರ್ದಾರ್, ಮಹಮ್ಮದ್ ಶಕೀಲ್, ಇಕ್ಬಾಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.