ಹುಬ್ಬಳ್ಳಿ: ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕೆಜಿಪಿಎಲ್ (ಕರ್ನಾಟಕ ಜಿಮ್ಖಾನಾ ಪ್ರೀಮಿಯರ್ ಲೀಗ್) ಬ್ಯಾಡ್ಮಿಂಟನ್ ಟೂರ್ನಿ–ಸೀಸನ್ 3ಗೆ ನಗರದ ಜಿಮ್ಖಾನಾ ಕ್ಲಬ್ ಆವರಣದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.
ಕ್ಲಬ್ ಚೇರ್ಮನ್ ನಂದಕುಮಾರ ಮಾತನಾಡಿ, ‘ವಿಶ್ವ ಬ್ಯಾಡ್ಮಿಂಟನ್ ದಿನಾಚರಣೆಗೆ ಅಂಗವಾಗಿ ಈ ಟೂರ್ನಿ ಆಯೋಜಿಸಲಾಗಿದ್ದು, ಈ ಮೂಲಕ ಕ್ರೀಡಾಪಟುಗಳ ಹಾಗೂ ಕ್ರೀಡಾಭಿಮಾನಿಗಳ ಸ್ಥೈರ್ಯ ಹೆಚ್ಚಿಸಲಾಗಿದೆ’ ಎಂದರು.
ಅಸೋಸಿಯೇಷನ್ ಉಪಾಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ‘ಕ್ರೀಡೆ ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ. ಒತ್ತಡದಿಂದ ಹೊರಬರಲು ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.
ಅಸೋಸಿಯೇಷನ್ ಕಾರ್ಯದರ್ಶಿ ವೀರಣ್ಣ ಸವಡಿ ಮಾತನಾಡಿ, ‘ಟೂರ್ನಿಯಲ್ಲಿ ಒಟ್ಟು ನಾಲ್ಕು ತಂಡಗಳು ಭಾಗವಹಿಸಿದ್ದು, ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರರು ಕೂಡ ಆಡಲಿದ್ದಾರೆ. ಕ್ರೀಡಾಪ್ರೇಮಿಗಳಿಗೆ ಇದು ರಸದೌತಣ ನೀಡಲಿದೆ’ ಎಂದು ತಿಳಿಸಿದರು.
ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ನ ವ್ಯವಸ್ಥಾಪಕ ನಿರ್ದೇಶಕ ವೀರೇಶ ಉಂಡಿ ಮಾತನಾಡಿದರು. ಸಂಯೋಜಕ ಉದಯ ಬಾಡಕರ್, ಸಂಕಲ್ಪ ಶೆಟ್ಟರ್, ಸಮುಂದ್ರಸಿಂಗ್, ವಿನೋದ ಬತ್ತದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.