ADVERTISEMENT

ಉಪಚುನಾವಣೆ | ಪ್ರತಿಬಾರಿಯೂ ಕುಮಾರಸ್ವಾಮಿ ಕಣ್ಣೀರು ನಡೆಯಲ್ಲ: ಸಿಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 13:19 IST
Last Updated 25 ಅಕ್ಟೋಬರ್ 2024, 13:19 IST
<div class="paragraphs"><p>ಎಚ್‌.ಡಿ ಕುಮಾರಸ್ವಾಮಿ, ಸಿಎಂ&nbsp;ಸಿದ್ದರಾಮಯ್ಯ</p></div>

ಎಚ್‌.ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ

   

ಹುಬ್ಬಳ್ಳಿ: 'ಪ್ರತಿಬಾರಿಯೂ ಭಾವನಾತ್ಮಕ ಮಾತು, ಕಣ್ಣೀರು ಹಾಕುವುದನ್ನು ನೋಡಿ ಜನರು ಬೇಸತ್ತಿದ್ದಾರೆ. ಇದಕ್ಕೆಲ್ಲ ಮತದಾರರು ಮಾರು ಹೋಗುವುದಿಲ್ಲ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಕಿದರು.

'ನಿಖಿಲ್ ಕುಮಾರಸ್ವಾಮಿಯನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ' ಎನ್ನುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಭಾಷಣ ವಿಷಯವಾಗಿ ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, 'ಎಲ್ಲ ಸಂದರ್ಭದಲ್ಲೂ ಅಳು ನೋಡಿ ಜನರು ಮತ ಹಾಕುವುದಿಲ್ಲ. ಅವರಿಗೂ ನೋಡಿ ನೋಡಿ ಸಾಕಾಗಿದೆ. ಮತದಾರರ ಆಶೀರ್ವಾದ ನಮ್ಮ‌ ಮೇಲಿದೆ' ಎಂದರು.

ADVERTISEMENT

'ಉಪ ಚುನಾವಣೆಯ ಮೂರು ಕ್ಷೇತ್ರಗಳಲ್ಲಿ ನಾವು ಗೆಲ್ಲಲಿದ್ದು, ಸಮರ್ಥ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕಿಳಿಸಿದ್ದೇವೆ' ಎಂದು ಹೇಳಿದರು.

'ಕಾಂಗ್ರೆಸ್ ಯಾವಾಗಲೂ ಒಳ ಒಪ್ಪಂದದ ರಾಜಕಾರಣ ಮಾಡುವುದಿಲ್ಲ. ಅದು ಬಿಜೆಪಿನೇ ಮಾಡಿಕೊಂಡಿರಬಹುದು. ಅವರು ಸೋಲಲೆಂದೇ ಇಂತಹ ರಾಜಕಾರಣ ಮಾಡಿಕೊಳ್ಳುತ್ತಾರೆ. ಶಿಗ್ಗಾವಿಯಲ್ಲಿ ನಾವು ಗೆಲ್ಲುವ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ' ಎಂದರು.

'ಶಿಗ್ಗಾವಿಯಲ್ಲಿ ನಮಗೆ ಅಭ್ಯರ್ಥಿ ಎದುರಾಳಿಯಲ್ಲ, ಕಾಂಗ್ರೆಸ್' ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಕಳೆದ ಚುನಾವಣೆಯಲ್ಲಿ ನಾವು ಬಿಜೆಪಿಗೆ ತೀವ್ರ ಸ್ಪರ್ಧೆ ಒಡ್ಡಿದ್ದೆವು. ಸ್ಪರ್ಧೆಯೇ ಇಲ್ಲದಿದ್ದರೆ ಹೆಚ್ಚು ಮತಗಳು ಹೇಗೆ ಬಂದಿತು? ಬೊಮ್ಮಾಯಿ ಸ್ಪರ್ಧಿಸಿದ್ದ ಶಿಗ್ಗಾವಿ ಕ್ಷೇತ್ರದಲ್ಲಿಯೇ ಹೆಚ್ಚು ಮತಗಳು ಬಂದಿವೆ. ನಮಗೆ ಅಲ್ಲಿ ಬಿಜೆಪಿ ಎದುರಾಳಿಯೇ ಅಲ್ಲ' ಎಂದು ಹೇಳಿದರು.

'ಶಿಗ್ಗಾವಿ ವಿಧಾನಸಭಾ ಕ್ಚೇತ್ರದ ಟಿಕೆಟ್ ಅನ್ನು ಯಾಸಿನ್ ಪಠಾಣ್ ಮತ್ತು ಅಜ್ಜಂಪೀರ್ ಖಾದ್ರಿ ಇಬ್ಬರೂ ಕೇಳಿದ್ದರು. ಇಬ್ಬರೂ ಸಮರ್ಥ ಅಭ್ಯರ್ಥಿಗಳೇ. ಕಳೆದ ಬಾರಿ ಪಠಾಣ್ ಅವರಿಗೆ ನೀಡಲಾಗಿತ್ತು, ಹೀಗಾಗಿ ಈಗಲೂ ಅವರಿಗೆ ನೀಡಲಾಗಿದೆ' ಎಂದು ಸಿಎಂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.